ರಾಯಚೂರು: ಉಸ್ಕಿಹಾಳ ವಾಲ್ಮೀಕಿ ಗುರುಪೀಠದ ಗುರುಗಳಾದ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ, ಜಿಲ್ಲೆಯ ಮಸ್ಕಿ ತಾಲೂಕಿನ ತಿಮ್ಮಾಪೂರ ಗ್ರಾಮದ ತಾತಪ್ಪನ ಗುದುಗೆ ಆವರಣದಲ್ಲಿ ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆ ನಡೆಯಿತು.
ಸಭೆಯಲ್ಲಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನಡೆಸಬೇಕಾದ ಹೋರಾಟಗಳು, ವಾಲ್ಮೀಕಿ ನಾಯಕ ಸಮಾಜದ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು, ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸುವುದು, ಸರ್ಕಾರದಿಂದ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ವಾಲ್ಮೀಕಿ ನಾಯಕ ಸಮಾಜದ ಐತಿಹಾಸಿಕ ಪುರುಷರ (ಮಹಾತ್ಮರ) ಹೈಜಾಕ್ ತಡೆಗಟ್ಟುವುದು, ಸಮಾಜವನ್ನು ಬಲಿಷ್ಟಗೊಳಿಸುವುದು, ಎಸ್ಟಿ ಹೆಸರಿನಲ್ಲಿ ಬೇರೆ ಸಮುದಾಯದವರು ಪಡೆಯುತ್ತಿರುವ ನಕಲಿ ಜಾತಿ ಪ್ರಮಾಣಪತ್ರಗಳನ್ನು ತಡೆಗಟ್ಟುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಆತ್ಮಾನಂದ ಸ್ವಾಮೀಜಿಗಳು, ವಾಲ್ಮೀಕಿ ನಾಯಕ ಸಮಾಜವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜವನ್ನು ಒಗ್ಗಟ್ಟಾಗಿಸಲು ಚಿಂತನ – ಮಂಥನ ಸಭೆಗಳು ಅವಶ್ಯಕವಾಗಿವೆ. ಮುಂದಿನ ದಿನಗಳಲ್ಲಿ ಕೂಡ ಚಿಂತನ ಮಂಥನ ಸಭೆಗಳು ನಡೆಯಲಿದ್ದು, ವಾಲ್ಮೀಕಿ ನಾಯಕ ಸಮಾಜದ ಯುವ ಜನತೆ ಸಭೆಗೆ ಆಗಮಿಸಬೇಕು. ಸಮಾಜದ ಏಳ್ಗೆಯಲ್ಲಿ ಯುವಕರ ಪಾತ್ರ ಮಹತ್ವದಾಗಿರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಹುಣ್ಣಿಮೆಯ ದಿನದಂದು ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆಗಳನ್ನು ನಡೆಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕಾಗಿದೆ. ಸಮಾಜವನ್ನು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ರೀತಿಯ ಸಭೆಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಅನೇಕರು ಅಭಿಪ್ರಾಯ ಪಟ್ಟರು.
ಉಸ್ಕಿಹಾಳ ಗ್ರಾಮದ ಆದಿತ್ಯ ನಾಯಕ ನಿರೂಪಿಸಿದರು. ಶೇಖರಗೌಡ ಕಾಟಗಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಾಲಿ ಶೇಖರಗೌಡ ಬಳಗಾನೂರು, ಶೇಖರಗೌಡ ಕಾಟಗಲ್, ಅಮರೇಶ್ ಪಾಟೀಲ್ ಮಸ್ಕಿ, ಭೀಮಬಾಯಿ ಪಾಟೀಲ್, ಲಕ್ಷ್ಮಿ, ಹನುಮೇಶ್ ನಾಯಕ, ಗೋವಿಂದ ನಾಯಕ ಗಾಣದಾಳ, ವೆಂಕೋಬ ನಾಯಕ, ಕರಿಗೌಡ, ರಂಗಪ್ಪ ಮಾಸ್ತಾರ, ವೆಂಕನಗೌಡ ಉಸ್ಕಿಹಾಳ, ಅಂಬಣ್ಣ ನಾಯಕ ಡೊಂಣಮರಡಿ ಗುಜ್ಜಲರ್, ವೆಂಕಟೇಶ ನಾಯಕ, ಅಮರೇಗೌಡ ವಕೀಲರು, ಹನುಮೇಶ್ ನಾಯಕ ಬಳಗಾನೂರು, ಪಂಪನಗೌಡ ತಿಮ್ಮಾಪೂರ, ಬಸವರಾಜ ನಾಯಕ ಆಸಿಹಾಳ, ಆದಿತ್ಯ ನಾಯಕ ಉಸ್ಕಿಹಾಳ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.