ಬೀದರ್ (ಜು.28): ಕಲಾವಿದರು ಜಾಗೃತರಾಗಬೇಕು. ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಲೆಯನ್ನು ಉಳಿಸಿ, ಬೆಳಸಿಕೊಂಡು ಸಾಗಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ಸಂಭ್ರಮಾಚರಣೆ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಮತ್ತು ಜನಪದ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಸುಮಾರು ಕಲಾವಿದರು ಸೇರಿಕೊಂಡು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಮಾಡಿಕೊಂಡಿದ್ದಾರೆ. ಆ ಮೂಲಕ ಕಲಾವಿದರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಲೆ ಮತ್ತು ಕಲಾವಿದರಲ್ಲಿ ಬಹಳಷ್ಟು ಶಕ್ತಿ ಇರುತ್ತದೆ. ಸಾಮಾನ್ಯ ವ್ಯಕ್ತಿಯಾಗಿದ್ದ ಚಂದ್ರುರವರನ್ನು ಮುಖ್ಯಮಂತ್ರಿ ಚಂದ್ರುರವರನ್ನಾಗಿ, ಪರ್ಮನೆಂಟ್ ಮುಖ್ಯಮಂತ್ರಿಯಾಗಿ ಮಾಡಿರುವುದು ಕಲೆ. ಒಬ್ಬ ಕಲಾವಿದ ತಾನು ತೋರಿಸುವ ಕಲೆಯಿಂದಲೇ ಪ್ರಚಾರ ಪಡೆಯುತ್ತಾನೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ನಾನು ಸಚಿವನಾಗಿ ಕುಮಾರಸ್ವಾಮಿರವರ ಪಕ್ಕದ ಸಿಟ್ ನಲ್ಲಿಯೇ ಕುಳಿತಿದ್ದೆ. ಕಲಾವಿದರಿಗೆ ಮಾಶಾಸನ ನೀಡಬೇಕು ಎಂದು ಅಂದು ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಮನವಿ ಮಾಡಿದ್ದೆ.
ಪ್ರತಿನಿತ್ಯ ಜನಪದ ಹಾಡುಗಳನ್ನು ಹಾಡುವುದರಿಂದ ಕೇಳುವುದರಿಂದ, ಜನಪದ ಕಲೆಯಿಂದ ಅರ್ಧದಷ್ಟು ಕಾಯಿಲೆಗಳು ನಮ್ಮಿಂದ ದೂರವಾಗುತ್ತವೆ. ಜನಪದ ಕಲೆಗಳನ್ನು ಉಳಿಸಿಕೊಂಡು, ಬೆಳಸಿಕೊಂಡು ಹೋಗುವ ಕೆಲಸವಾಗಬೇಕಾಗಿದೆ. ಪ್ರಾಚೀನ ಕಾಲದ ಕಲೆ, ಸಾಹಿತ್ಯ ಮಾಯವಾಗುತ್ತಿದೆ. ಅವುಗಳನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗಬೇಕಾಗಿದೆ. ಅಂತದಕ್ಕೆ ಸರ್ಕಾರದಿಂದ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ.
ಒಕ್ಕೂಟದವರು ಮಂಡನೆ ಮಾಡಿದ ಹತ್ತು ಬೇಡಿಕೆಗಳಲ್ಲಿ ಯಾವ ಬೇಡಿಕೆ ಕೂಡ. ಈಡೇರಿಸಲು ಆಗದೇ ಇರುವ ಬೇಡಿಕೆಗಳು ಅಲ್ಲ. ಸರ್ಕಾರ ಮನಸ್ಸು ಮಾಡಿದರೇ ಕೇವಲ ಐದು ನಿಮಿಷಗಳಲ್ಲಿ ಕಲಾವಿದರ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ. ಈ ಸರ್ಕಾರ ಅದನ್ನು ಮಾಡಬೇಕಾಗಿದೆ. ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಆ ಕೆಲಸ ಮಾಡುತ್ತೇವೆ.
ಈ ಹಿಂದೆ ಒಕ್ಕೂಟದ ವತಿಯಿಂದ ನನಗೆ ಮನವಿ ಸಲ್ಲಿಸಿದ್ದರು. ಅದರ ಬಗ್ಗೆ ಅಧಿವೇಶನದಲ್ಲಿ ನಾನು ಕೇಳಿದ ಪ್ರಶ್ನೆ ಸ್ಟಾರ್ ಆಗಿದ್ದರಿಂದ ಕಲಾವಿದರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ನಾನು ಮಾಡಿದ್ದೆ. ಸಚಿವರು ಅದಕ್ಕೆ ಉತ್ತರವನ್ನು ನೀಡಿದ್ದರು. ಕಲಾವಿದರ ಮಾಶಾಸನ ಎರಡು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸುವಂತೆ ಒಕ್ಕೂಟದಿಂದ ಮನವಿ ಮಾಡಿದ್ದಾರೆ. ಅದನ್ನು ಹತ್ತು ಸಾವಿರದವರೆಗೂ ಹೆಚ್ಚಿಸುವಂತೆ ಮನವಿ ಮಾಡಬೇಕಾಗಿದೆ.
ಭಾರತ ದೇಶ ದೊಡ್ಡ ಪ್ರಮಾಣದಲ್ಲಿ ಶ್ರೇಷ್ಠತೆ ಪಡೆದಿರುವುದು ನಮ್ಮ ಸಂಸ್ಕೃತಿಯಿಂದಲೆ. ನಮ್ಮ ಸಂಸ್ಕೃತಿ, ನಮ್ಮ ಸಭ್ಯತೆಯೇ ನಮ್ಮ ದೇಶದ ಆಸ್ತಿಯಾಗಿದೆ. ಕಲೆ, ಸಾಹಿತ್ಯದಿಂದ ಉತ್ತಮ ಸಂಸ್ಕೃತಿ, ಸಭ್ಯತೆ ರೂಪಿಸಲು ಸಾಧ್ಯವಾಗುತ್ತದೆ. ರಾಜ್ಯದ ಕಲಾವಿದರ ವಯೋಮಾನ 58 ರಿಂದ 50 ಕ್ಕೆ ಇಳಿಸಬೇಕು ಎಂದು ಮನವಿ ಮಾಡಲಾಗಿದೆ. ಕಲೆ, ಮತ್ತು ಕಲಾವಿದರಿಗೆ ವಯಸ್ಸಿನ ಭೇದ ಭಾವವಿಲ್ಲ. ಅಲ್ಲದೇ ಕಲಾವಿದರಿಗೆ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಕೂಡ ಇರುವುದಿಲ್ಲ.
ಕಲಾವಿದರ ಬೇಡಿಕೆಗಳ ಪರವಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಸಲ್ಲಿಸುತ್ತೇನೆ. ಅಲ್ಲದೇ ನಮ್ಮ ಪಕ್ಷದ ನಾಯಕರಾದ ಕುಮಾರಸ್ವಾಮಿರವರಿಗೂ ಕೂಡ ಮನವಿ ಮಾಡುತ್ತೇನೆ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಾಗಿದೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಸಹಾಯ ಮಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರು, ಶಾಸಕ ರಹಿಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಗೌರವ ಸಲಹೆಗಾರ ಶ್ರೀನಿವಾಸ ಜಿ ಕಪ್ಪಣ್ಣ, ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ, ಡಿಂಗ್ರಿ ನರೇಶ್ ಸೇರಿದಂತೆ ಅನೇಕರಿದ್ದರು.
No comments:
Post a Comment