Friday, August 2, 2024

ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಶ್ರೀನಿವಾಸ ಸರಡಗಿಯಲ್ಲಿ ಶಿಬಿರ

ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಶ್ರೀನಿವಾಸ ಸರಡಗಿಯಲ್ಲಿ ಶಿಬಿರ

ಕಲಬುರಗಿ (ಆ.02): ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಕಲಬುರಗಿ ನಗರದಲ್ಲಿರುವ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೋಟಿ ಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವಿದ್ಯಾರ್ಥಿಗಳು ಶುಕ್ರವಾರ ಶಿಬಿರ ನಡೆಸಿದರು.
ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿಯಾಗಿರುವ ಉಪನ್ಯಾಸಕಿ ಡಾ. ಜ್ಯೋತಿ ಕಡಾದಿ, ವಿದ್ಯಾರ್ಥಿ ಸಂಯೋಜಕಿ, ಉಪನ್ಯಾಸಕಿ ಕರುಣಾ ಪಾಟೀಲ್ ರವರ ನೇತೃತ್ವದಲ್ಲಿ ಶ್ರೀನಿವಾಸ ಸರಡಗಿ ಗ್ರಾಮಕ್ಕೆ ಆಗಮಿಸಿದ ಎನ್ಎಸ್ಎಸ್ ವಿದ್ಯಾರ್ಥಿಗಳು ಗ್ರಾಮದಲ್ಲಿ  ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಿ, ಸಸಿ ನಾಟಿ ಮಾಡುವ ಮೂಲಕ ಶ್ರಮದಾನ ಮಾಡಿದರು. ಇದೇ ವೇಳೆ ಅವರು, ಗ್ರಾಮದಲ್ಲಿನ ಮನೆಗಳಿಗೆ ತೆರಳಿ ಸರ್ವೆ ಕಾರ್ಯ ನಡೆಸಿ, ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಿದರು.
ಬಳಿಕ ಸಂಜೆಯ ವೇಳೆ ಶ್ರೀನಿವಾಸ ಸರಡಗಿಯ ಶ್ರೀ ಚಿನ್ನದ ಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದ ಪರಮ ಪೂಜ್ಯ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರು, ಎನ್.ಎಸ್.ಎಸ್ ಶಿಬಿರದಿಂದ ಏನೆಲ್ಲಾ ಲಾಭಗಳು ಇವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಕಾನೂನು ವಿದ್ಯಾರ್ಥಿಗಳ ಮೇಲೆ ಬಹಳಷ್ಟು ದೊಡ್ಡಮಟ್ಟದ ಜವಾಬ್ದಾರಿ ಇರುತ್ತದೆ. ಕಾನೂನು ವಿದ್ಯಾರ್ಥಿಗಳಿಂದ ಬಹಳಷ್ಟು ಜನರು ಒಳಿತನ್ನು ನಿರೀಕ್ಷೆ ಮಾಡ್ತಿರುತ್ತಾರೆ. ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವುದರಲಿಂದ ಸಾಕಷ್ಟು ಅನುಕೂಲಗಳಾಗುತ್ತವೆ.
ಗ್ರಾಮೀಣ ಭಾಗದ ಜನರಿಗೆ ಪರಿಸರದ, ಕಾನೂನಿನ ಅರಿವು ಮೂಡಿಸುವುದು ಬಹಳ ಮುಖ್ಯವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸಗಳನ್ನು ಕಾನೂನು ವಿದ್ಯಾರ್ಥಿಗಳು ಮಾಡಬೇಕು ಎಂದು ಡಾ.ರೇವಣಸಿದ್ದ ಶಿವಾಚಾರ್ಯರು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಎನ್.ಎಸ್.ಎಸ್ ಅಧಿಕಾರಿ ಡಾ. ಜ್ಯೋತಿ ಕಡಾದಿ, ಎನ್.ಎಸ್.ಎಸ್ ಸೇರುವ ವಿದ್ಯಾರ್ಥಿಗಳು ಸೇವಾ ಮನೋಭಾವಕ್ಕೆ ತಯಾರಾಗಿರುತ್ತಾರೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಅವರು ಸರಡಗಿ ಗ್ರಾಮದಲ್ಲಿ ಸ್ವಚ್ಚತೆ ನಡೆಸಿ, ತಗ್ಗು ತೆಗೆದು ಸಸಿ ನಾಟಿ ಮಾಡಿದ್ದಾರೆ. ಕಾನೂನು ವಿದ್ಯಾರ್ಥಿಗಳು ಸಮಾಜ ಸೇವೆಗೂ ತಯಾರಾಗಿರುತ್ತೇವೆ ಎಂದು ನಮ್ಮ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಗೀತಾಶ್ರೀ ಪ್ರಾರ್ಥಿಸಿದರೆ, ಭಾಗ್ಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿ ಅಮರೇಶ್ ನಿರೂಪಿಸಿದರೆ, ಆಶೀಸ್ ಕುಮಾರ್ ವಂದಿಸಿದರು. ಗ್ರಾಮದ ಹಿರಿಯರಾದ ಸಂಗಯ್ಯಸ್ವಾಮಿ ಹಿರೇಮಠ, ಶರಣಗೌಡ ಬಿರಾದಾರ, ಎನ್.ಎಸ್.ಎಸ್ ಕ್ಯಾಂಪ್ ಅಧಿಕಾರಿ ಜ್ಯೋತಿ ಕಡಾದಿ, ಕರುಣಾ ಪಾಟೀಲ್ ಸೇರಿದಂತೆ ಎನ್.ಎಸ್.ಎಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
#ssl_law_college #Kalaburagi #News #Karnataka #Kannada #Law #College


Monday, May 20, 2024

ಪಾಮನಕಲ್ಲೂರು: ಗ್ರಾ.ಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

ಪಾಮನಕಲ್ಲೂರು: ಗ್ರಾ.ಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

ರಾಯಚೂರು (ಮೇ.20): ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನಡೆಯಿತು.

ಈ ಸಭೆಯಲ್ಲಿ 2022-23ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು 2023-24ನೇ ಸಾಲಿನ ಸಾಮಾಜಿಕ ಪರಿಶೋಧನೆ ನಡೆಸಲಾಯಿತು.

ಸಭೆಯ ಅಧ್ಯಕ್ಷೆತಯನ್ನು ಮಾನ್ವಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಾಲಿಂಗ ಹೆಚ್ ಇಂಗಳದಾಳರವರು ವಹಿಸಿದ್ದರು. ಲೆಕ್ಕ ಪರಿಶೋಧನೆ ಮಾಹಿತಿಯನ್ನು ಲಿಂಗಸುಗೂರು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ  ಚಂದ್ರು ಪವ್ಹಾರ್ ಹಂಚಿಕೊಂಡರು. 

ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶೇಖ್ ಹುಸೇನ್ ಶರೀಫ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಹೆಚ್ ಹುನಗುಂದ, ಗ್ರಾಮ ಪಂಚಾಯತಿ ಸದಸ್ಯರು, ಸಾಮಾಜಿಕ ಪರಿಶೋಧನೆ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀದೇವಿ, ಹುಸೇನಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ಚೌಡ್ಲಿ, ಶಾಂಭವಿ, ಸುಂಡೆಪ್ಪ ಆನಂದಗಲ್, ರಮೇಶ್ ಚಿಲ್ಕರಾಗಿ, ಅಮರೇಶ್ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಶರಣಪ್ಪ ಕೊಂಡಾಲ್ ಸೇರಿದಂತೆ ಅನೇಕರಿದ್ದರು.

Saturday, May 11, 2024

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ರಾಯಚೂರು (ಮೇ.11): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಶುಕ್ರವಾರ ಸಡಗರ ಸಂಭ್ರಮದಿಂದ ಅದ್ಧೂರಯಾಗಿ ನಡೆಯಿತು.

ಪ್ರತಿ ವರ್ಷ ಬಸವ ಜಯಂತಿಯಂದು ನಡೆಯುವಂತೆ ಈ ವರ್ಷವೂ ಬಸವ ಜಯಂತಿ ದಿನವಾದ ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಂಜೆ ರಥೋತ್ಸವ ಮತ್ತು ಉಚ್ಚಯ್ಯಗಳೊಂದಿಗೆ ಮುಕ್ತಾಯವಾಯಿತು.

ಆದಿ ಬಸವೇಶ್ವರನ ಸನ್ನಿಧಿಯಲ್ಲಿ ನವಜೀವನಕ್ಕೆ ಕಾಲಿಟ್ಟ ನವಜೋಡಿಗಳು:

ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು. ಅನೇಕ ಜನ ನವಜೋಡಿಗಳು ಆದಿ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಮಲದಗುಡ್ಡದ ಶ್ರೀಗಳು, ಮುಡಲಗುಂಡದ ಶ್ರೀಗಳ ಆಶೀರ್ವಾದದೊಂದಿಗೆ ನವಜೀವನಕ್ಕೆ ಕಾಲಿಟ್ಟರು. 

ಪ್ರಸಾದ ವ್ಯವಸ್ಥೆ:

ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿ ವರ್ಷವೂ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ರಥ, ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದ ಭಕ್ತರು:

ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ರಥೋತ್ಸವ ಮತ್ತು ಉಚ್ಚಯ್ಯ ಕಾರ್ಯಕ್ರಮದಲ್ಲಿ ಜಾತ್ರೆಗೆ ಆಮಿಸಿದ ಭಕ್ತರು ರಥ ಮತ್ತು ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದರು. ಇನ್ನೂ ಈ ವರ್ಷ ಆದಿ ಬಸವೇಶ್ವರ ರಥಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿ ರಥೋತ್ಸವ ಕಾರ್ಯಕ್ರಮಕ್ಕೆ ಯುವ ಸಮುದಾಯ ಮೆರುಗ ತಂದಿತ್ತು.

ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:

ಆದಿ ಬಸವೇಶ್ವರ ಜಾತ್ರೆಯೂ ಗ್ರಾಮದಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶೇಷ ಜಾತ್ರೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ರಥೋತ್ಸವ ಕಾರ್ಯಕ್ರಮದ ಸಮಯಕ್ಕೆ ಪಾಮನಕಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೂಜ್ಯರು, ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮದ ಯುವಕರು, ಪಾಮನಕಲ್ಲೂರು, ಚಿಕ್ಕ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಮಿಸಿದ್ದ ಭಕ್ತರು ಸೇರಿದಂತೆ ಅನೇಕರಿದ್ದರು.

Monday, April 29, 2024

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಖೂಬಾ, ಖಾಶೆಂಪುರ್, ಬೆಲ್ದಾಳೆ

 ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಖೂಬಾ, ಖಾಶೆಂಪುರ್, ಬೆಲ್ದಾಳೆ

ಬೀದರ್ (ಏ.28): ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆರವರು ಭಾನುವಾರ ದಿನವಿಡೀ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದರು.

ಮೊದಲಿಗೆ ಶ್ರೀಕ್ಷೇತ್ರ ಹೊನ್ನಿಕೇರಿಯ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಗ್ರಾಮದಿಂದ ಮತಯಾಚನೆ ಆರಂಭಿಸಿದ ಅವರು, ಬಳಿಕ ಕಪಲಾಪೂರ, ಕೋಳಾರ (ಕೆ), ಅಮಲಾಪೂರ, ಯಾಕಾತಪೂರ, ಬರೂರು ಸೇರಿದಂತೆ ವಿವಿಧೆಡೆ ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅಭ್ಯರ್ಥಿ ಭಗವಂತ ಖೂಬಾರವರು, ನಾನು ಎರಡು ಬಾರಿ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಭಾರತೀಯ ಜನತ ಪಕ್ಷ ಮೂರನೇ ಬಾರಿಗೆ ನನ್ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ನಮಗೆ ಈ ಬಾರಿ ಜೆಡಿಎಸ್ ಕೂಡ ಕೈ ಜೋಡಿಸಿದೆ. ಈ ಬಾರಿ ಕೂಡ ನನ್ನನ್ನು ಗೆಲ್ಲಿಸಿ ಕಳಿಸಿದರೆ ನಾನು ಇನ್ನಷ್ಟು ಯೋಜನೆಗಳನ್ನು ಬೀದರ್ ಲೋಕಸಭಾ ಕ್ಷೇತ್ರಕ್ಕೆ ತರುತ್ತೇನೆ ಎಂದರು.

ಯಾವ ಪರಿವಾರ ಭಾಲ್ಕಿಯನ್ನು ಅಭಿವೃದ್ಧಿ ಮಾಡಿಲ್ಲವೋ ಆ ಪರಿವಾರ ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈಶ್ವರ್ ಖಂಡ್ರೆರವರ ಅಸಹಕಾರದ ನಡುವೆಯೇ ನಾನು ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ.

ಖಂಡ್ರೆಯವರಿಗೆ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಒಂದೇ ಒಂದು ಸ್ಟೇಡಿಯಂ ಇಲ್ಲ. ಇನ್ನೂ ಅವರು ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಭಗವಂತ ಖೂಬಾರವರು ಪ್ರಶ್ನಿಸಿದರು.

ನಾನು ಸಂಸದನಾದ ಬಳಿಕ ನನ್ನ ಕ್ಷೇತ್ರದಲ್ಲಿ ಶಕ್ತಿ ಮೀರಿ ಒಡಾಟ ಮಾಡಿದ್ದೇನೆ. ಜನರಿಗೆ ಸ್ಪಂದಿಸುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಚಿವನಾಗಿಯೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ತಾವು ನನ್ನನ್ನು ಮೂರನೇ ಅವಧಿಗೆ ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಿ ಎಂದು ಕ್ಷೇತ್ರದ ಜನರಿಗೆ ಕೇಂದ್ರ ಸಚಿವ ಭಗವಂತ ಖೂಬಾರವರು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಮಾನತೆಯಿಂದ ಕೆಲಸ ಮಾಡಿ ಎನ್‌ಡಿಎ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಕೊಡಬೇಕು. ಇದು ನರೇಂದ್ರ ಮೋದಿ - ರಾಹುಲ್ ಗಾಂಧಿಯವರ ಎಲೆಕ್ಷನ್ ಆಗಿದೆ ಎಂದರು.

ಕಾಂಗ್ರೆಸ್ ನವ್ರು ಬರಿ ಸುಳ್ಳು ಹೇಳ್ತಾರೆ. ಚುನಾವಣೆಗೆ ಮುನ್ನ ಇವ್ರು ಹತ್ತು ಕೆ.ಜಿ ಅಕ್ಕಿ ಕೊಡ್ತಿವಿ ಅಂದಿದ್ರು. ಈಗ ಕಾಂಗ್ರೆಸ್ ನವ್ರು ನಿಮ್ಮ ಊರಿಗೆ ಬಂದ್ರೆ ಹತ್ತು ಕೆ.ಜಿ ಅಕ್ಕಿ ಕೇಳ್ರಿ. ಮೊದ್ಲು ಹತ್ತು ಕೆ.ಜಿ ಅಕ್ಕಿ ಕೊಟ್ಟು ವೋಟ್ ಕೇಳ್ರಿ ಎಂದು ಹೇಳಿ. ಕಾಂಗ್ರೆಸ್ ನವರ ಗ್ಯಾರಂಟಿಗಳು ಲೆಕ್ಕಕ್ಕೆ ಇಲ್ಲದಾಗಿವೆ.

ಸ್ವಾತಂತ್ರ ಭಾರತದಲ್ಲಿ ಬೀದರ್ ನಿಂದ ಯಾರೂ ಕೂಡ ಕೇಂದ್ರ ಸಚಿವರು ಆಗಿರಲಿಲ್ಲ. ಮೊದಲ ಬಾರಿಗೆ ಭಗವಂತ ಖೂಬಾರವರು ಕೇಂದ್ರ ಸಚಿವರಾಗಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಖೂಬಾರವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬೀದರ್ ನಿಂದ ದೆಹಲಿಯವರೆಗೂ ಟ್ರಾಕ್ ಕ್ಲೇರ್ ಇರಬೇಕು ಅಂದ್ರೆ ಖೂಬಾರವರ ಗೆಲುವು ಅಗತ್ಯವಾಗಿದೆ. ಆಗಾಗಿ ಕ್ಷೇತ್ರದ ಜನರು ಖೂಬಾರವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮಾತನಾಡಿ, ಬಿಜೆಪಿ, ಜೆಡಿಎಸ್ ಎರಡು ಸೇರಿ ಅತಿ ಹೆಚ್ಚಿನ ಮತ ತೆಗೆದುಕೊಳ್ಳಬೇಕು. ನಾವು ನಮ್ಮ ಮಕ್ಕಳು ಸುರಕ್ಷಿತವಾಗಿ ಇರಬೇಕು ಎನ್ನುವುದಾರರೇ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಬೀದರ್ ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದ್ರೆ ಖೂಬಾ ಮತ್ತೊಮ್ಮೆ ಸಂಸದರಾಗಿಬೇಕು ಎಂದರು.

ಕಾಂಗ್ರೆಸ್ ನವ್ರು ತೋರಿಸಿದ ಚೆಂಬು ಅಕ್ಷಯ ಪಾತ್ರೆಯಾಗಿದೆ. ಮೋದಿಯವರು ಅಕ್ಷಯ ಪಾತ್ರೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವ್ರು ಖಾಲಿ ಚೆಂಬು ಎನ್ನುತ್ತಿದ್ದಾರೆ. ಮೋದಿಯವರು, ಖೂಬಾರವರು ಕೊಟ್ಟ ಕೊಡುಗೆಯಿಂದ ಸಾಕಷ್ಟು ರಸ್ತೆಗಳಾಗಿವೆ. ಬಿಜೆಪಿ, ಜೆಡಿಎಸ್ ಎರಡು ಪಕ್ಷ ಒಂದಾಗಿ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಕಡ್ಯಾಳ, ದೇವೇಂದ್ರ ಸೋನಿ, ರಾಜಶೇಖರ ಜವಳೆ, ಪರಶುರಾಮ, ಸಂಜುಕುಮಾರ್ ಮಾಶೆಟ್ಟಿ, ಜೈಸಿಂಗ್ ರಾಠೋಡ್, ರಾಜರೆಡ್ಡಿ, ಹಣಮಂತರಾವ್ ಮೈಲಾರಿ, ಶಿವರಾಜ ಶೆಮಶೆಟ್ಟಿ, ಪರಶುರಾಮ, ನಾಗಭೂಷಣ ಕಮಠಾಣೆ ಸೇರಿದಂತೆ ಅನೇಕರಿದ್ದರು.

ಖೂಬಾರವರ ಗೆಲುವಿಗಾಗಿ ನಾವು ಒಂದಾಗಿದ್ದೇವೆ: ಬಂಡೆಪ್ಪ ಖಾಶೆಂಪುರ್

 ಖೂಬಾರವರ ಗೆಲುವಿಗಾಗಿ ನಾವು ಒಂದಾಗಿದ್ದೇವೆ: ಬಂಡೆಪ್ಪ ಖಾಶೆಂಪುರ್

 

ಬೀದರ್ (ಏ.29): ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರ ಗೆಲುವಿಗಾಗಿ ನಾವು, ಬೆಲ್ದಾಳೆಯವರು ಒಂದಾಗಿದ್ದೇವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರ ಪರವಾಗಿ ಭಾನುವಾರ ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ, ಮುತ್ತಂಗಿ, ಉಡಬಾಳ, ಮಂಗಲಗಿ, ಖೇಳಿ ರಂಜೋಳ, ಔರಾದ (ಎಸ್), ಸಿರ್ಸಿ (ಎ), ಕಾಡವಾದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆಯವರೊಟ್ಟಿಗೆ ಜಂಟಿಯಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು.

ದೇಶದ ಒಳಿತಿಗಾಗಿ ಮೋದಿಯವರು, ದೇವೇಗೌಡರು ಒಂದಾಗಿದ್ದಾರೆ. ಅದರಂತೆಯೇ ಕ್ಷೇತ್ರದ ಒಳಿತಿಗಾಗಿ ನಾವು ಒಂದಾಗಿದ್ದೇವೆ. ಕರ್ನಾಟಕದ ಹೊಸಪೇಟೆಯಲ್ಲಿ ಮೋದಿಯವರು, ಕುಮಾರಸ್ವಾಮಿರವರು ಜೊತೆಯಾಗಿ ಮತಯಾಚನೆ ನಡೆಸಿದ್ದಾರೆ. ಬೀದರ್ ನಲ್ಲಿ ನಾನು, ಬೆಲ್ದಾಳೆಯವರು ಜೊತೆಯಾಗಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.

ಇವತ್ತು ದೇಶ ಯಾರು ಮುನ್ನಡೆಸಬೇಕು ಎಂಬುದು ಮುಖ್ಯವಾಗಿದೆ. ದೇವೇಗೌಡರಂತಹ ಮುತ್ಸದ್ದಿ ರಾಜಕಾರಣಿ ಮೋದಿಯವರ ಆಡಳಿತವನ್ನು ಮೆಚ್ಚಿದ್ದಾರೆ. ಭಾರತ ಸುರಕ್ಷಿತವಾಗಿ ಇರಬೇಕಾದರೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದಿದ್ದಾರೆ. ನಾವು ದೇವೇಗೌಡರ ಹಾದಿಯಲ್ಲಿ ಸಾಗಬೇಕಾಗಿದೆ. ದೇವೇಗೌಡರು ಒಂದು ವರ್ಷದ ಹಿಂದೆಯೇ ಮೈತ್ರಿ ಮಾಡಿಕೊಂಡಿದ್ದರೆ ಕಾಂಗ್ರೆಸ್ ಸರ್ಕಾರ ಇರುತ್ತಿರಲಿಲ್ಲ. ನಾವೇ ಅಧಿಕಾರದಲ್ಲಿ ಇರುತ್ತಿದ್ದೇವು ಎಂದು ಬಂಡೆಪ್ಪ ಖಾಶೆಂಪುರ್ ರವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನವ್ರಿಗೆ  ಗ್ಯಾರಂಟಿಗಳ ಮೇಲೆ ವಿಶ್ವಾಸ ಹೋಗಿದೆ:

ಕಾಂಗ್ರೆಸ್ ನವರಿಗೆ ತಾವು ಜಾರಿಗೆ ತಂದ ಗ್ಯಾರಂಟಿಗಳ ಮೇಲೆ ವಿಶ್ವಾಸ ಹೋಗಿದೆ. ಈಗ ಅವರು ಚೊಂಬು ಹಿಡಿದುಕೊಂಡಿದ್ದಾರೆ. ಗ್ಯಾರಂಟಿ ಮರೆತುಬಿಟ್ಟಿದ್ದಾರೆ. ಚೊಂಬಿನ ಮೇಲೆ ಮತ ಕೇಳಲು ಮುಂದಾಗಿದ್ದಾರೆ. ಜನ ಅವರಿಗೆ ಪಾಠ ಕಲಿಸಬೇಕು. ಬೀದರ್ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಭಗವಂತ ಖೂಬಾರವನ್ನು ಗೆಲ್ಲಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು, ಭಗವಂತ ಖೂಬಾರವರು ಬೀದರ್  ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಕೂಡ ಉತ್ತಮವಾದ ಕೆಲಸ ಮಾಡಿದ್ದಾರೆ ಎಂದರು.

ಖೂಬಾರವರು ಬೀದರ್ ಜಿಲ್ಲೆಗೆ ರೈಲ್ವೆ, ರೋಡ್ ಸೇರಿದಂತೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ನಾವು ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಿದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಲಿವೆ. ಆಗಾಗಿ ಬೀದರ್ ಲೋಕಸಭಾ ಕ್ಷೇತ್ರದ ಜನರು ಖೂಬಾರವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಜುರೆಡ್ಡಿ ನಿರ್ಣಾ, ಐಲಿಂಜಾನ್ ಮಠಪತಿ, ರಾಜು ಕಡ್ಯಾಳ, ದೇವೇಂದ್ರ ಸೋನಿ, ರಾಜಶೇಖರ ಜವಳೆ, ಸೂರ್ಯಕಾಂತ್ ದಂಡಿ, ರಾಜರೆಡ್ಡಿ ಶಹಬಾದ್, ಚಂದ್ರಯ್ಯ ಸ್ವಾಮಿ, ಸುರೇಶ್ ಮಾಶೆಟ್ಟಿ, ರವಿಸ್ವಾಮಿ, ಬೊಮ್ಮಗೊಂಡ ಚಿಟ್ಟವಾಡಿ, ಭಜರಂಗ ಖಾಶೆಂಪುರ್, ದತ್ತು ಕಾಡವಾದ, ಬಸವರಾಜ ಶಾಪೂರ  ಸೇರಿದಂತೆ ಅನೇಕರಿದ್ದರು.

Saturday, April 6, 2024

ಜೆಡಿಎಸ್ - ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ: ಬಂಡೆಪ್ಪ ಖಾಶೆಂಪುರ್

ಜೆಡಿಎಸ್ - ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬೀದರ್ (ಏ.06): ಜೆಡಿಎಸ್ - ಬಿಜೆಪಿ ಒಂದಾಗಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬೇರೆ ಪಕ್ಷದವರು ಆಶ್ಚರ್ಯ ಪಡುವಂತಾಗಿದೆ. ಆ ರೀತಿಯ ಜನ ಬೆಂಬಲ ನಮ್ಮ ಮೈತ್ರಿಗೆ ಸಿಕ್ಕಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ನಗರದಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾರವರ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ - ಜೆಡಿಎಸ್ ಪಕ್ಷಗಳ ಮುಖಂಡರ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಪಕ್ಷಗಳ ನಾಯಕರನ್ನು ಒಂದುಕಡೆ ಸೇರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ‌. ಇದು ನಮಗೆ ದೊಡ್ಡ ಶಕ್ತಿಯೊಂದಿಗೆ ದೊಡ್ಡಮಟ್ಟದ ಸಂದೇಶವನ್ನು ನೀಡುತ್ತದೆ ಎಂದರು.
ನಾವು ಈ ಮೈತ್ರಿಯನ್ನು ವಿಧಾನಸಭಾ ಚುನಾವಣೆಯ ಮೊದಲೇ ಮಾಡಿಕೊಂಡಿದ್ದರೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನೇಕ ಜನ ನಾಯಕರು ಈಗಾಗಲೇ ಅನೇಕ ಭಾಷಣಗಳಲ್ಲಿ ಹೇಳಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಭಾಗದಲ್ಲಿ ನಾವು ಪಣ ತೋಡಬೇಕಾಗಿದೆ.
ನಮ್ಮ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸುವಂತ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ. ನಾವು ಈಗಾಗಲೇ ಮೂರನೇ ಬಾರಿಗೆ ಸಭೆ ಸೇರಿದ್ದೇವೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ:
ನಾನು ಬಿಜೆಪಿ ಜೊತೆಗಿನ ಮೈತ್ರಿ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಎರಡು ಸಂದರ್ಭಗಳಲ್ಲಿ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಮಗೆ ಬಿಜೆಪಿ ಜೊತೆಗಿನ ಮೈತ್ರಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಪ್ರೋತ್ಸಾಹ, ಬೆಂಬಲ ಸಿಕ್ಕಿದೆ. ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ. ಈ ಮೈತ್ರಿಗೆ ನಮ್ಮ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ನಮ್ಮ ಜೆಡಿಎಸ್ ಪಕ್ಷದಿಂದ ಬೂತ್ ಮಟ್ಟದಿಂದ ನಮ್ಮ ಮತಗಳನ್ನು ಬಿಜೆಪಿಗೆ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ದೇವೇಗೌಡರ ಸೂಚನೆ ಪಾಲಿಸೋಣ:
ಮೋದಿಯವರ ನೇತೃತ್ವದಲ್ಲಿ ಮತ್ತೆ ಭಾರತ ಮುನ್ನಡೆಸಬೇಕಾಗಿದೆ. ಭಾರತ ಮತ್ತಷ್ಟು ಬಲಿಷ್ಠವಾಗಬೇಕಾಗಿದೆ. ವಿಶ್ವಕ್ಕೆ ಮಾದರಿಯಾಗಿ ಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ಭಾರತಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ನಾವೆಲ್ಲರೂ ಮೋದಿಯವರಿಗೆ ಬೆಂಬಲ ಕೊಡಬೇಕು ಎಂದು ಈಗಾಗಲೇ ಹೆಚ್.ಡಿ ದೇವೇಗೌಡರು ಜೆಡಿಎಸ್ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಅದರಂತೆಯೇ ನಾವು ಬೀದರ್ ನಿಂದ ಚಾಮರಾಜನಗರದವರೆಗೂ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಬೀದರ್ ನಲ್ಲಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹಂತಹಂತವಾಗಿ ಸಭೆ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ (ಪ್ರತಿಪಕ್ಷ) ನಾಯಕರಾದ ಆರ್ ಅಶೋಕ್, ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾ, ಜಿಲ್ಲೆಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ‌ ರಘುನಾಥರಾವ್ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಮಹೇಶ್ವರಿ ವಾಲಿ, ಸಜ್ಜದ್ ಸಾಹೇಬ್, ಎಂ.ಜಿ ಮೂಳೆರವರು ಸೇರಿದಂತೆ ಬೀದರ್ ಲೋಕಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಇದ್ದರು.
#BandeppaKhashempur #Bandeppa #Khashempur #ಬಂಡೆಪ್ಪಖಾಶೆಂಪುರ್ #ಬಂಡೆಪ್ಪ #ಖಾಶೆಂಪುರ್ #ಆರ್_ಅಶೋಕ್ #RAshoka #BhagwantKhubha #Mallikarjunkhubha

Friday, February 16, 2024

ಇದು ರೈತರನ್ನು ಕಡೆಗಣಿಸಿದ ಬಜೆಟ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಇದು ರೈತರನ್ನು ಕಡೆಗಣಿಸಿದ ಬಜೆಟ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಗ್ಯಾರಂಟಿಗಳ ನಡುವೆ ರೈತರನ್ನ ಮರೆತ ಸರ್ಕಾರ: ಬಂಡೆಪ್ಪ ಖಾಶೆಂಪುರ್ ಬೇಸರ

ಬಂಡೆಪ್ಪ ಖಾಶೆಂಪುರ್

ಬೀದರ್ (ಫೆ.16): ಸಿದ್ದರಾಮಯ್ಯರವರ ನೇತೃತ್ವದ ಈ ಸರ್ಕಾರದ ಮೇಲೆ ರಾಜ್ಯದ ರೈತರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೇ ಈ ಬಜೆಟ್ ನಲ್ಲಿ ರೈತರನ್ನ ಕಡೆಗಣಿಸಲಾಗಿದೆ. ಇದು ಸಂಪೂರ್ಣವಾಗಿ ರೈತರನ್ನ ಕಡೆಗಣಿಸಿದ ಬಜೆಟ್ ಆಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ವಾಡಿಕೆಯಂತೆ ಮಳೆಯಾಗದ ಕಾರಣದಿಂದಾಗಿ ಬಿತ್ತನೆ ಮಾಡಿದ ಬೆಳೆಗಳನ್ನು ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗಿದ್ದ ಸರ್ಕಾರ ಇದುವರೆಗೂ ಸೂಕ್ತವಾದ ಬರ ಪರಿಹಾರವನ್ನು ನೀಡಿಲ್ಲ.
ಬಜೆಟ್ ನಲ್ಲಿ ಆದರೂ ಕೃಷಿ ಕ್ಷೇತ್ರಕ್ಕೆ ಉತ್ತಮ ಯೋಜನೆ ರೂಪಿಸುತ್ತಾರೆ. ಆ ಮೂಲಕ ರಾಜ್ಯ ಸರ್ಕಾರದವರು ನಮ್ಮ ಕೈ ಹಿಡಿಯುತ್ತಾರೆ ಎಂದು ನಂಬಿಕೊಂಡು ಕುಳಿತಿದ್ದ ಅನ್ನದಾತರ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹುಸಿಗೊಳಿಸಿದೆ. ರೈತರೇ ದೇಶದ ಬೆನ್ನೆಲುಬು ಎಂದು ಬರಿ ಬಾಯಿ ಮಾತಿನಿಂದ ಹೇಳಿದರೆ ಸಾಕಾಗುತ್ತಾ ಎಂದು ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಬಂಡೆಪ್ಪ ಖಾಶೆಂಪುರ್ ರವರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಯಾವುದೇ ಗ್ಯಾರಂಟಿ ಯೋಜನೆ ನೀಡಿಲ್ಲ:
ಗ್ಯಾರಂಟಿ ಯೋಜನೆಗಳ ಮಧ್ಯದಲ್ಲಿ ರೈತರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಕುಳಿತಿದ್ದರು. ರೈತರ ಸಾಲಮನ್ನಾ ಮಾಡಬೇಕು. ಬೆಂಬಲ ಬೆಲೆ ನೀಡಬೇಕು ಎಂಬುದು ರೈತರ ಒತ್ತಾಯವಾಗಿತ್ತು. ಈ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ರೈತರಿಗೆ ಯಾವುದೇ ಯೋಜನೆ ರೂಪಿಸಿಲ್ಲ.
ಬರಗಾಲ ಬಂದಿದೆ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಿದೆ. ರೈತರಿಗೆ ಧೈರ್ಯ ತುಂಬುವ ಯಾವುದೇ ಯೋಜನೆ ಕೂಡ ಈ ಬಜೆಟ್ ನಲ್ಲಿ ಇಲ್ಲ. ಮಹತ್ವದ ನೀರಾವರಿ ಯೋಜನೆಗಳು ಕೂಡ ಇಲ್ಲ. ಈ ಸರ್ಕಾರ ಸಾಲಮನ್ನಾವಂತು ಮಾಡಿಲ್ಲ. ಕೊನೆ ಪಕ್ಷ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವನ್ನಾದರು ನೀಡಬೇಕಾಗಿತ್ತು. ಆದರೆ ಆ ಕೆಲಸವನ್ನು ಈ ಸರ್ಕಾರ ಮಾಡಿಲ್ಲ ಎಂದು ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.
ಬೀದರ್ ಜಿಲ್ಲೆಗೂ ವಿಶೇಷ ಪ್ಯಾಕೇಜ್ ಏನು ಇಲ್ಲ:
ಬೀದರ್ ಹಿಂದುಳಿದ ಪ್ರದೇಶವಾಗಿದೆ. ಯಾವುದೇ ವಿಶೇಷ ಪ್ಯಾಕೇಜ್ ಬೀದರ್ ಜಿಲ್ಲೆಗೆ ನೀಡಿಲ್ಲ. ಬೀದರ್ ಜಿಲ್ಲೆಯನ್ನು ಈ ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಇದು ನಮ್ಮ ಜಿಲ್ಲೆಗೆ ಮಾಡಿದ ಅನ್ಯಾಯವಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
#ಬಂಡೆಪ್ಪ_ಖಾಶೆಂಪುರ್ #ಬಂಡೆಪ್ಪ #ಖಾಶೆಂಪುರ್ #Bandeppa_Khashempur #Bandeppa #Khashempur #Bidar #News #Mla #ExMLA #ExMinister #karnataka #StateGovernment #Bajet2024 #statebajet

Tuesday, January 30, 2024

ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಗೌಡೂರಿನ ಜಯಶ್ರೀ

ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಗೌಡೂರಿನ ಜಯಶ್ರೀ

ಪ್ರಶಸ್ತಿ ಸ್ವೀಕರಿಸಿದ ಜಯಶ್ರೀ

ದೊರೆ ನ್ಯೂಸ್ ಕನ್ನಡ / Dore News Kannada

ರಾಯಚೂರು (ಜ.30): ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಜಯಶ್ರೀ ತಂದೆ ಜಗದೀಶ್ ಎಂಬ ವಿದ್ಯಾರ್ಥಿನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.

2023-24 ನೇ ಸಾಲಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಹಾಗೂ ಸ್ಪರ್ಶ ಟ್ರಸ್ಟ್ ಸಹಯೋಗದೊಂದಿಗೆ ರಾಯಚೂರು ನಗರದಲ್ಲಿ ಸೋಮವಾರ ನಡೆದ ABCD ಯೋಜನೆಯ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಜಯಶ್ರೀಗೆ ತೃತೀಯ ಸ್ಥಾನ ದೊರೆತಿದ್ದು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆರವರು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.

ಇನ್ನೂ ವಿದ್ಯಾರ್ಥಿಯ ಸಾಧನೆಗೆ ಮಾಜಿ ತಾ.ಪಂ ಸದಸ್ಯರಾದ ರಾಜಾ ಶೇತುರಾಮ್ ನಾಯಕ,  ಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ಯಾವತಿ, ಸಹ ಶಿಕ್ಷಕರಾದ ಮೊಹಮ್ಮದ್ ಫರಿದ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Saturday, January 27, 2024

ಕಲಬುರಗಿ: ಲಾಹೋಟಿ ಲಾ ಕಾಲೇಜಿನಲ್ಲಿ ಸಡಗರದಿಂದ ನಡೆದ ಸ್ವಾಗತ ಸಮಾರಂಭ

ಕಲಬುರಗಿ: ಲಾಹೋಟಿ ಲಾ ಕಾಲೇಜಿನಲ್ಲಿ ಸಡಗರದಿಂದ ನಡೆದ ಸ್ವಾಗತ ಸಮಾರಂಭ

ಕಾರ್ಯಕ್ರಮವನ್ನುಉದ್ಘಾಟಿಸುತ್ತಿರುವ ಗಣ್ಯರು

ಕಲಬುರಗಿ (ಜ.27): ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ (ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ) ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೇಠ್ ಶಂಕರಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಶನಿವಾರ ಮೂರು ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವು ಸಡಗರ ಸಂಭ್ರಮದಿಂದ ನಡೆಯಿತು.

ಕಲಬುರಗಿ ಜಿಲ್ಲೆಯ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಗುಪ್ತಲಿಂಗ ಪಾಟೀಲ್ ರವರು ಹಾಗೂ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಸವಿತಾ ಆರ್ ಗಿರಿರವರು ಸಸಿಗೆ ನೀರೆರೆಯುವ ಮೂಲಕ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಪ್ತಲಿಂಗ ಪಾಟೀಲ್ ರವರು, ಎಲ್ಲಾ ವೃತ್ತಿಗಳಲ್ಲಿ ವಕೀಲ ವೃತ್ತಿ ಎಂಬುದು ಶ್ರೇಷ್ಠವಾದ ವೃತ್ತಿಯಾಗಿದೆ. ಈ ವೃತ್ತಿಗೆ ಬರಬೇಕಾದರೆ ಕಷ್ಟ ಪಟ್ಟು ಓದಿ, ಬರೆದು ಉತ್ತೀರ್ಣರಾಗಿ ಬರಬೇಕಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿರುವ
ಗುಪ್ತಲಿಂಗ ಪಾಟೀಲ್ ರವರು

ಕಾನೂನು ಪದವಿ ಎಂಬುದು ಶ್ರೇಷ್ಠ ಪದವಿಯಾಗಿದೆ. ಕಾನೂನು ಪದವಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉತ್ತಮ ವಕೀಲರಾಗಬೇಕಾದರೆ ಹಿರಿಯ ವಕೀಲರ ಬಳಿ ಸಹಾಯಕರಾಗಿ ಕೆಲಸ ಮಾಡಬೇಕು. ಸೇಠ್ ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಓದಿದವರು ಅನೇಕ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಬಹುತೇಕರು ವಕೀಲರು, ನ್ಯಾಯಾಧೀಶರು ಆಗಿದ್ದಾರೆ ಎಂದರು.

ಕನ್ನಡಕ್ಕೆ ತನ್ನದೇಯಾದ ಶಕ್ತಿ ಇದೆ:

ಕನ್ನಡ ಭಾಷೆಗೆ ತನ್ನದೇಯಾದ ಶಕ್ತಿಯಿದೆ. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದೇನೆ. ಕಾನೂನು ಪದವಿ ಕಲೆಯುವುದು ಕಷ್ಟ ಎಂಬ ಮನೋಭಾವದಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೊರ ಬರಬೇಕು. ಕನ್ನಡದಲ್ಲಿ ಕಲೇತವರು ಕೂಡ ದೊಡ್ಡಮಟ್ಟದ ಸಾಧನೆ ಮಾಡಿದ್ದಾರೆ.

ಕನ್ನಡ ಮಾಧ್ಯಮದವರು ಬಹಳಷ್ಟು ವಿಕ್ ಇರ್ತಾರೆ ಅನ್ನೋದು ಶುದ್ಧ ಸುಳ್ಳು. ಕನ್ನಡ ಮಾಧ್ಯಮದವರು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಕೋರ್ಟ್ ಕೂಡ ಕನ್ನಡಕ್ಕೆ ಆದ್ಯತೆ ನೀಡಿದೆ. ಕನ್ನಡ ಮಾಧ್ಯಮದವರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಹಣ ಗಳಿಸುವುದರ ಹಿಂದೆ ಹೋಗುವ ಬದಲಿಗೆ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಗುಪ್ತಲಿಂಗ ಪಾಟೀಲ್ ರವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಸವಿತಾ ಆರ್ ಗಿರಿರವರು, ಎಲ್ಲಿ ಸಲ್ಲದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿ ಸಲ್ಲುವವರು ಎಲ್ಲಾ ಕಡೆ ಸಲ್ಲುತ್ತಾರೆ ಎಂಬ ಮಾತಿನಂತೆ ಕಾನೂನು ಪದವಿ ಕಲೆತವರು ಕೋರ್ಟ್, ಕಛೇರಿ, ಮಾಧ್ಯಮ ಸೇರಿದಂತೆ ಎಲ್ಲಾ ಕಡೆ ಅವರು ಕೆಲಸ ಮಾಡಬಲ್ಲರು ಎಂದರು.

ಕಾನೂನು ಪದವಿಯಲ್ಲಿ ಯೋಚನಾ ಶಕ್ತಿ ಮುಖ್ಯವಾಗಿರುತ್ತದೆ. ಬ್ಯಾಂಕ್, ಕೋರ್ಟ್, ಮಾಧ್ಯಮ ಸೇರಿದಂತೆ ಕಾನೂನು ಪದವಿಗೆ ಎಲ್ಲಾ ಕ್ಷೇತ್ರದಲ್ಲಿ ಕೂಡ ವಿಶೇಷ ಆದ್ಯತೆ ಇರುತ್ತದೆ. ಪ್ರತಿಯೊಬ್ಬ ನಾಗರೀಕರು ಕೂಡ ಭಾರತ ಸಂವಿಧಾನ ಮತ್ತು ಕಾನೂನಿನ ಪುಸ್ತಕಗಳನ್ನು ಓದುವುದು ಮುಖ್ಯವಾಗಿರುತ್ತದೆ. ಅದರಲ್ಲಿ ಹೆಚ್ಚಾಗಿ ಲಾ ವಿದ್ಯಾರ್ಥಿಯಾದವರಿಗೆ ಕಾನೂನು ಪುಸ್ತಕಗಳ ಓದು ಅತಿಮುಖ್ಯವಾಗಿರುತ್ತದೆ. ಸಂವಿಧಾನ ಮತ್ತು ಕಾನೂನಿನ ಪುಸ್ತಕಗಳನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಇಟ್ಟುಕೊಂಡು ಓದುವುದು ಉತ್ತಮ ಎಂದು ಡಾ. ಸವಿತಾ ಆರ್ ಗಿರಿರವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶಾಂತೇಶ್ವರಿ ಶಾಂತಗೀರಿ, ಮಹೇಶ್ವರಿ ಹೀರೆಮಠ, ಜ್ಯೋತಿ ಕಡಾಡಿ, ಕರುಣಾ ಪಾಟೀಲ್, ರೇಣುಕಾ ದೇವರಮನಿ, ಜ್ಯೋತಿ ಹಂಗರಗಿರವರು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿಗಾರರು: ಅಯ್ಯಣ್ಣ ನಾಯಕ ಪಾಮನಕಲ್ಲೂರು

Thursday, January 25, 2024

ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಭಾಜನರಾದ ಪಾಮನಕಲ್ಲೂರಿನ ಯಲ್ಲಪ್ಪ ಸಾನಬಾಳ

ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಭಾಜನರಾದ ಪಾಮನಕಲ್ಲೂರಿನ ಯಲ್ಲಪ್ಪ ಸಾನಬಾಳ

ಪಾಮನಕಲ್ಲೂರು ಗ್ರಾಮದ ಯಲ್ಲಪ್ಪ ಸಾನಬಾಳ

ರಾಯಚೂರು (ಜ.25): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರೀಯ ವಲಯದ 7ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ 45 ವರ್ಷ ವಯಸ್ಸಿನ ಯಲ್ಲಪ್ಪ ಸಾನಬಾಳರವರಿಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ಲಭಿಸಿದೆ.

2007ರಿಂದ ಬೆಂಗಳೂರಿನ ಕೇಂದ್ರೀಯ ವಲಯದ ಏಳನೇ ಘಟಕದಲ್ಲಿ ಹವಾ ನಿಯಂತ್ರಿತ ಬಸ್ ನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಸಾನಬಾಳರವರ 7 ವರ್ಷಗಳ ಅಪಘಾತರಹಿತ ಮೋಟಾರು ವಾಹನ ಚಾಲನಾ ಸೇವೆಯನ್ನು ಗುರುತಿಸಿ 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಬುಧವಾರ ಬೆಂಗಳೂರಿನಲ್ಲಿ ನಡೆದ ಚಾಲಕರ ದಿನದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿರವರು ನೀಡಿ ಗೌರವಿಸಿದ್ದಾರೆ.

ಈ ಹಿಂದೆ ಬೆಳ್ಳಿ ಪದಕವನ್ನು ಪಡೆದಿದ್ದರು:

ಅಪಘಾತರಹಿತ ಮೋಟಾರು ವಾಹನ ಚಾಲನಾ ಸೇವೆಗಾಗಿ ಈ ಹಿಂದೆ ಯಲ್ಲಪ್ಪ ಸಾನಬಾಳರವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು.

ಲಾರಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭ:

ಪಾಮನಕಲ್ಲೂರು ಗ್ರಾಮದ ಯಲ್ಲಪ್ಪ ಸಾನಬಾಳರವರು 2002ರಲ್ಲಿ ಲಾರಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭಿಸಿ 2005 ರವರೆಗೆ ಕೆಲಸ ಮಾಡಿದರು. ಬಳಿಕ ಡ್ರೈವರ್ ಕೆಲಸಕ್ಕಾಗಿ ಅಲೆದಾಡಿ 2005 ರಲ್ಲಿ ದಿನಕ್ಕೆ75 ರೂಪಾಯಿಗಳ ದಿನಗೂಲಿಯ ಆಧಾರದ ಮೇಲೆ ಕ್ರೂಸರ್ ಗಾಡಿಯ ಚಾಲಕರಾಗಿ ಕೆಲಸ ಆರಂಭಿಸಿ 2007ರವೆರೆಗೆ ಕ್ರೂಸರ್ ನಡೆಸಿದ್ದರು.

2007ರಲ್ಲೇ ಬಿಎಂಟಿಸಿ ಡ್ರೈವರ್ ಹುದ್ದೆಗೆ ಆಯ್ಕೆ:

ಎರಡು ಮೂರು ವರ್ಷಗಳ ಕಾಲ ಕ್ರೂಸರ್ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದ ಯಲ್ಲಪ್ಪ ಸಾನಬಾಳರವರು ಮಾಸಿಕ 1800 ರೂಪಾಯಿಗಳ ವೇತನದ ಆಧಾರದ ಮೇಲೆ 2007ರಲ್ಲಿ ಬಿಎಂಟಿಸಿಯಲ್ಲಿ ಚಾಲಕರಾಗಿ ಆಯ್ಕೆಯಾಗಿದ್ದರು.

ಬಿಎಂಟಿಸಿಯ ನೌಕರಿ ಬಿಡುವ ನಿರ್ಧಾರ ಮಾಡಿದ್ದರು:

2007ರಲ್ಲಿ ಬಿಎಂಟಿಸಿಯಲ್ಲಿ ಚಾಲಕನಾಗಿ ಕರ್ತವ್ಯ ಆರಂಭಿಸಿದ್ದ ಯಲ್ಲಪ್ಪ ಸಾನಬಾಳರವರು ಬೆಂಗಳೂರಿನಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಚಾಲಕ ವೃತ್ತಿಗೆ ವಿಧಾಯ ಹೇಳುವ ನಿರ್ಧಾರ ಮಾಡಿದ್ದರು. ಆಗ ಅವರ ತಂದೆ ಯಂಕಪ್ಪ ಸಾನಬಾಳರವರು ಹಾಗೂ ಯಲ್ಲಪ್ಪರವರ ಗೆಳೆಯರು ಬುದ್ಧಿ ಮಾತು ಹೇಳಿ ದೈರ್ಯ ತುಂಬಿದ್ದರು.

ತಂದೆಯ ಹಾಗೂ ಸ್ನೇಹಿತರ ಮಾತುಗಳಿಗೆ ಮನ್ನಣೆ ನೀಡಿ ಕೆಲಸ ಮುಂದುವರಿಸಿದ ಯಲ್ಲಪ್ಪರವರು 2009ರ ವೇಳೆಗೆ ಪ್ರೊಬೇಷನರಿ ಅವಧಿ ಕ್ಲಿಯರ್ ಮಾಡಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಉತ್ತಮ ಚಾಲಕರಾಗಿ ಗುರುತಿಸಿಕೊಂಡು ಸಾಗುತ್ತಿದ್ದಾರೆ.

ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು:

ಉತ್ತಮ ಚಾಲಕನಾಗಿ ಗುರುತಿಸಿಕೊಂಡು ಬೆಳ್ಳಿ, ಬಂಗಾರದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ಯಲ್ಲಪ್ಪ ಸಾನಬಾಳರವರು ಪಾಮನಕಲ್ಲೂರು ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಅವರಿಗೆ ಶುಭವಾಗಲಿ ಇನ್ನೂ ಉನ್ನತಮಟ್ಟದ ಪ್ರಶಸ್ತಿ, ಸನ್ಮಾನ, ಗೌರವಗಳು ಅವರಿಗೆ ಸಿಗಲಿ ಎಂದು ಗ್ರಾಮಸ್ಥರು ಹಾಗೂ ಅವರ ಸ್ನೇಹಿತರಾದ ವಿಶ್ವನಾಥ ಸ್ವಾಮಿ ಜಿನ್ನದ್ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಕೆಲಸಕ್ಕಾಗಿ ಸುತ್ತಾಡಿ ಬಿಎಂಟಿಸಿ ಚಾಲಕನಾಗಿ ಎಲ್ಲರಂತೆ ನಾನಲ್ಲ. ನಾನು ನನ್ನ ಕೆಲಸದಲ್ಲಿ ಶ್ರದ್ಧೆವಹಿಸಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು, ಕೆಲಸದಲ್ಲೇ ದೇವರನ್ನು ಕಾಣಬೇಕು ಎಂಬ ಅಚಲ ನಂಬಿಕೆಯಿಂದ ಕಾಯಕವೇ ಕೈಲಾಸ ಎಂದುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಸಾನಬಾಳರವರನ್ನು ಗುರುತಿಸಿ ಅವರಿಗೆ ಬೆಳ್ಳಿ, ಬಂಗಾರದ ಪದಕಗಳನ್ನು ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅವರಿಗೆ ಇನ್ನಷ್ಟು ಪ್ರಶಸ್ತಿ ಗೌರವಗಳು ಲಭಿಸಿಲಿ ಎಂದು ನಾವು ಕೂಡ ಶುಭ ಹಾರೈಸೋಣ.

ವಿಶೇಷ ಲೇಖನ:

ಅಯ್ಯಣ್ಣ ನಾಯಕ ಪಾಮನಕಲ್ಲೂರು

Sunday, January 21, 2024

ಪಾಮನಕಲ್ಲೂರು: ಗ್ರಾಮದ ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತೋತ್ಸವ

 

ರಾಯಚೂರು (ಜ.21): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯರವರ 904ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.

ಗ್ರಾಮದ ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯರವರ ನಾಮ ಫಲಕಕ್ಕೆ ಹಾಗೂ ಭಾವಚಿತ್ರಕ್ಕೆ ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮಕ್ಕೆ ಗ್ರಾಮದಲ್ಲಿರುವ ಅಂಬಿಗ (ಗಂಗಮತ / ಕಬ್ಬಲಿಗ) ಸಮಾಜದ ಮುಖಂಡರು ಹಾಗೂ ಗ್ರಾಮದ ಗುರು ಹಿರಿಯರು ಚಾಲನೆ ನೀಡಿದರು.

ಗ್ರಾಮದಲ್ಲಿರುವ ಮಹಾತ್ಮರ ನಾಮ ಫಲಕಗಳಿಗೆ ಪೂಜೆ:

ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವದ ನಿಮಿತ್ತವಾಗಿ ಎಂದಿನಂತೆ ಗ್ರಾಮದಲ್ಲಿರುವ ಒಳಬಳ್ಳಾರಿ ಚನ್ನಬಸವೇಶ್ವರ, ಮಹರ್ಷಿ ವಾಲ್ಮೀಕಿ, ದಾಸ ಶ್ರೇಷ್ಠ ಭಕ್ತ ಕನಕದಾಸ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ರವರ ನಾಮಫಲಕಗಳು ಸೇರಿದಂತೆ ಗ್ರಾಮದಲ್ಲಿರುವ ಅನೇಕ ಜನ ಮಹಾತ್ಮರ ನಾಮಫಲಕಗಳಿಗೆ ಗ್ರಾಮಸ್ಥರ ನೇತೃತ್ವದಲ್ಲಿ ಏಕಕಾಲಕ್ಕೆ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆಯಲಾಯಿತು.

ಗ್ರಾಮ ಪಂಚಾಯತಿ ಕಛೇರಿಯಲ್ಲಿ ಜಯಂತೋತ್ಸವ:

ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವದ ನಿಮಿತ್ತವಾಗಿ ಗ್ರಾಮದಲ್ಲಿರುವ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಂಚಾಯತಿ ಸಿಬ್ಬಂದಿ ಸೂಗಪ್ಪ ಮರೆಡ್ಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಅಂಬಿಗರ ಚೌಡಯ್ಯರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಗ್ರಾಮದ ವಿವಿಧೆಡೆ ನಡೆದ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾನಂದ ಸ್ವಾಮೀಜಿ, ಹುಸೇನಪ್ಪ ಗೊಬ್ಬಿ, ಶಂಕ್ರಪ್ಪ ಸಾನಬಾಳ, ಪ್ರಭು ಧಣಿ, ಯಲ್ಲಪ್ಪ ಶಾಸ್ತ್ರಿ, ನಾಗಲಿಂಗಪ್ಪ, ಮಲ್ಲಿಕಾರ್ಜುನ ಗೊಬ್ಬಿ, ರಮೇಶ್ ಗಡ್ಡಿಮನಿ, ಲಕ್ಷ್ಮಣ ಚೌಡ್ಲಿ, ಬಸವರಾಜ ಪೋಸ್ಟ್ ಮಾಸ್ಟರ್, ದುರುಗಪ್ಪ ಕಲ್ಲೂರು, ಶ್ರೀನಿವಾಸ್ ಸಾನಬಾಳ, ಕಿಟ್ಟಪ್ಪ ಈಳಿಗೇರ, ಸೈಕಲ್ ಶಾಪ್ ಪಾಷಾ, ವೀರೇಶ ಹೊನ್ನಳ್ಳಿ, ಶರಣಪ್ಪ ಕೊಂಡಾಲ್, ಮರಿಸ್ವಾಮಿ, ನಿಂಗಪ್ಪ ಕುರುಬರು, ರಾಮಚಂದ್ರಪ್ಪ ಕಲ್ಲೂರು, ಮಲ್ಲಪ್ಪ, ಮಲ್ಲಿಕಾರ್ಜುನ ನಾಲ್ವರಕರ್, ಶಿವು ಬಳಿ, ಶಶಿಧರ್, ಲಕ್ಷ್ಮಣ ದೊರೆ, ಮಹಾದೇವಪ್ಪ ಕಲ್ಲೂರು, ದುರ್ಗಸಿಂಗ್ ಸೇರಿದಂತೆ ಅನೇಕರಿದ್ದರು.