Monday, May 23, 2022

ಬ್ರಿಮ್ಸ್ ಸ್ವಚ್ಚತಾ ಕರ್ಮಿಗಳ ಹೋರಾಟಕ್ಕೆ ಶಾಸಕ ಬಂಡೆಪ್ಪ ಖಾಶೆಂಪುರ್ ಬೆಂಬಲ

 

 

ಬೀದರ್ (ಮೇ.21):  ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂರಕ್ಷಣಾ ವೇದಿಕೆ ಸಹಯೋಗದೊಂದಿಗೆ ಬ್ರಿಮ್ಸ್ ಆಸ್ಪತ್ರೆಯ ಮಹಿಳಾ ಸ್ವಚ್ಚತಾ ಕರ್ಮಿಗಳು ನಡೆಸುತ್ತಿರುವ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹಕ್ಕೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೆಂಬಲ ಸೂಚಿಸಿದರು.

ನಗರದ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಧರಣಿಯಲ್ಲಿದ್ದ ಮಹಿಳಾ ಸ್ವಚ್ಚತಾ ಕರ್ಮಿಗಳಿಂದ ಧರಣಿಯ ಮಾಹಿತಿ ಪಡೆದರು.

ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸುಮಾರು 80 ಜನ ಮಹಿಳಾ ಸ್ವಚ್ಚತಾ ಕರ್ಮಿಗಳು ಹಾಗೂ 16 ಜನ ನೈರ್ಮಲ್ಯ ಸ್ವಚ್ಚತಾ ಸಿಬ್ಬಂದಿಗಳಿಗೆ ಹಾಗೂ ಟೆಂಡರ್ ದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಟೆಂಡರ್ ರದ್ದುಪಡಿಸಿ ಸ್ವಚ್ಚತಾ ಕರ್ಮಿಗಳನ್ನು ಕೆಲಸದಿಂದ ತೆಗೆದಿದ್ದಾರೆ. ಅದನ್ನು ರೀ ಟೆಂಡರ್ ಮಾಡಬೇಕು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದಿಂದ ಬಡ ಸ್ವಚ್ಚತಾ ಕರ್ಮಿಗಳ ಸೇವೆಯನ್ನು ಮುಂದುವರೆಸಬೇಕು ಎಂದು ಧರಣಿ ನಿರತ ಮಹಿಳಾ ಸ್ವಚ್ಚತಾ ಕರ್ಮಿಗಳು ಶಾಸಕ ಬಂಡೆಪ್ಪ ಖಾಶೆಂಪುರ್ ರವರಿಗೆ ಮನವಿ ಮಾಡಿದರು.

ಧರಣಿ ನಿರತ ಸ್ವಚ್ಚತಾ ಕರ್ಮಿಗಳಿಂದ ಮಾಹಿತಿ ಪಡೆದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸ್ವಚ್ಚತಾ ಕರ್ಮಿಗಳ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ತಿಳಿಸಿದರು. ಕರ್ನಾಟಕ ದಲಿತ ಸಂರಕ್ಷಣಾ ವೇದಿಕೆಯ ಮುಖಂಡರು, ಮಹಿಳಾ ಸ್ವಚ್ಚತಾ ಕರ್ಮಿಗಳು, ನೈರ್ಮಲ್ಯ ಸ್ವಚ್ಚತಾ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.

No comments:

Post a Comment