Friday, December 30, 2022

ಕಪಲಾಪೂರ (ಎ): ವಿಶ್ವಗುರು ಬಸವಣ್ಣ, ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರ ಮೂರ್ತಿ ಅನಾವರಣಗೊಳಿಸಿದ ಗಣ್ಯರು

 


ಕಪಲಾಪೂರ (ಎ): ವಿಶ್ವಗುರು ಬಸವಣ್ಣ, ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರ ಮೂರ್ತಿ ಅನಾವರಣಗೊಳಿಸಿದ ಗಣ್ಯರು

ಬೀದರ್ (ಡಿ.30): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಲಾಪೂರ (ಎ) ಗ್ರಾಮದಲ್ಲಿ ನಿರ್ಮಿಸಲಾದ ವಿಶ್ವಗುರು ಬಸವಣ್ಣನವರ ಮತ್ತು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರುರವರ ಮೂರ್ತಿಗಳನ್ನು ಕೇಂದ್ರ ರಾಜ್ಯ ರಸಗೊಬ್ಬರ ಸಚಿವರಾದ ಭಗವಂತ ಖೂಬಾ, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸೇರಿದಂತೆ ಅನೇಕ ಗಣ್ಯರ ಮತ್ತು ಪರಮಪೂಜ್ಯರ ನೇತೃತ್ವದಲ್ಲಿ ಶುಕ್ರವಾರ ಅನಾವರಣ ಮಾಡಲಾಯಿತು.


ಮೂರ್ತಿ ಅನಾವರಣದ ಬಳಿಕ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾರವರು, 12ನೇ ಶತಮಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ಮೂರ್ತಿ ಮತ್ತು 21ನೇ ಶತಮಾನದ ಪಕ್ಕ ಬಸವಣ್ಣನವರ ಅನುಯಾಯಿಯಾಗಿ ಈ ಭಾಗದಲ್ಲಿ ನಿಜಾಮರ ಕಾಲದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಿ ನಡೆದಾಡುವ ದೇವರು ಎಂಬ ಪ್ರಖ್ಯಾತಿ ಪಡೆದ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರುರವರ ಮೂರ್ತಿಗಳನ್ನು ಅನಾವರಣ ಮಾಡಿರುವುದು ನಮ್ಮ ಪೂರ್ವ ಜನ್ಮದ ಪೂಣ್ಯವಾಗಿದೆ ಎಂದರು.

ಮನುಷ್ಯ ಸುಖ, ಶಾಂತಿಯಿಂದ ಜೀವನ ಸಾಗಿಸಲು ಮಹಾಪುರುಷರ ಆಶೀರ್ವಾದ ಸದಾ ನಮ್ಮ ಮೇಲೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಇಬ್ಬರು ಮಹಾಪುರುಷರು ತಮ್ಮ ತಮ್ಮ ಕಾಲದಲ್ಲಿ ಕ್ರಾಂತಿ ಮಾಡಿದ್ದಾರೆ. ಅವರ ನಡೆ, ನುಡಿ ಸಮಾಜಕ್ಕೆ ಮಾದರಿಯಾಗಿದೆ. ಅದೇ ಕಾರಣಕ್ಕಾಗಿ ಮಹಾತ್ಮರು ನಮ್ಮ ಮಧ್ಯದಲ್ಲಿ ಇನ್ನೂ ಇದ್ದಾರೆ ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಹೇಳಿದರು.


ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, 12ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವಕ್ಕೆ ಮಾದರಿಯಾಗುವಂತ ಸಾಮಾಜಿಕ ಕ್ರಾಂತಿ ಮಾಡಿದ್ದರು. ನಿಜಾಮರ ಕಾಲದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸುವ ಕೆಲಸವನ್ನು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರು ಮಾಡಿದ್ದಾರೆ. ಅಂತ ಇಬ್ಬರು ಮಹಾತ್ಮರ ಮೂರ್ತಿಗಳನ್ನು ಅನಾವರಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು‌.


ನಾವು ಮಹಾತ್ಮರ ಮೂರ್ತಿಗಳನ್ನು ನಿರ್ಮಿಸುವುದಷ್ಟೇ ಅಲ್ಲ ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ. ಬಸವಣ್ಣನವರು ಆಗಿನ ಕಾಲದಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಅಂದಿನ ಕಾಲದಲ್ಲಿ ಅವರು ಅನುಭವ ಮಂಟಪದಲ್ಲಿ ಮೀಸಲಾತಿ ಕಲ್ಪಿಸಿ, 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದ್ದರು.

21ನೇ ಶತಮಾನದಲ್ಲಿ ಚನ್ನಬಸವ ಪಟ್ಟದ್ದೆವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅದರಂತೆಯೇ ಬಾಬಾ ಸಾಹೇಬ್ ಡಾ. ಬಿ..ಆರ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿಕೊಟ್ಟಿದ್ದಾರೆ. ಸಮಾನತೆಗಾಗಿ ಹೋರಾಡಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ಕ್ರಾಂತಿಯಾಗುವುದು ಅವಶ್ಯಕವಾಗಿದೆ. ಶಿಕ್ಷಣದಲ್ಲಿ ಕ್ರಾಂತಿ ಆಗಬೇಕೆಂದರೆ, ಪ್ರತಿ ಹಳ್ಳಿಯಲ್ಲಿನ ಮಕ್ಕಳು ಶಿಕ್ಷಣವಂತರಾಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸಿಕೊಡಬೇಕು ಎಂಬ ಗುರಿಯೊಂದಿಗೆ ಚನ್ನಬಸವ ಪಟ್ಟದ್ದೆವರು ಕೆಲಸ ಮಾಡಿದ್ದಾರೆ.

ಸಿದ್ದರಾಮಪ್ಪ ಕಪಲಾಪೂರೆರವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಪ್ರೋತ್ಸಾಹಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಕಪಲಾಪೂರದ ಈ ಆಶ್ರಮಕ್ಕೆ ಅನುದಾನ ಒದಗಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರು, ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೆವರು, ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಕಪಲಾಪೂರದ ಪೂರ್ಣಾನಂದ ಮಹಾಸ್ವಾಮಿಗಳು, ಕೆಎಸ್ಐಐಡಿಸಿ ಅಧ್ಯಕ್ಷರಾದ ಡಾ. ಶೈಲೇಂದ್ರ ಬೆಳ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಪ್ರಮುಖರಾದ ಸೂರ್ಯಕಾಂತ್ ನಾಗಮರಪಳ್ಳಿ, ಶಂಕರ್ ಪಾಟೀಲ್, ಈಶ್ವರಿ, ಹಣುಮಂತರಾವ್ ಮೈಲಾರಿ, ಸಿದ್ದರಾಮಪ್ಪ ಕಪಲಾಪೂರೆ, ಶಕುಂತಲಾ ಬೆಲ್ದಾಳೆ, ಶಂಕರಪ್ಪ ಪಾಟೀಲ್, ನವಲಿಂಗ ಪಾಟೀಲ್ ರವರು ಸೇರಿದಂತೆ ಅನೇಕರಿದ್ದರು.

No comments:

Post a Comment