Friday, September 28, 2018

ಭಗತ್ ಸಿಂಗ್ ಜನ್ಮ ದಿನ ಆಚರಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಘಟಕದ ಮುಖಂಡರು

ದೊರೆನ್ಯೂಸ್: ಕ್ರಾಂತಿಕಾರಿ ನಾಯಕ, ಭಾರತ ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟ ಭಗತ್ ಸಿಂಗ್ ರ ಜನ್ಮದಿನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಘಟಕದ ಮುಖಂಡರು ತೆಕ್ಕಲಕೋಟೆಯಲ್ಲಿ  ಆಚರಿಸಿದರು. 
ಕ್ರಾಂತಿಕಾರಿ ನಾಯಕ ಭಗತ್ ಸಿಂಗ್ ಜಯಂತೋತ್ಸವದಲ್ಲಿ ಭಾಗವಹಿಸಿರುವ ನೂರಾರು ವಿದ್ಯಾರ್ಥಿಗಳು, ಸಂಘಟನೆಯ ಮುಖಂಡರು.

ತೆಕ್ಕಲಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು, ನೂರಾರು ವಿದ್ಯಾರ್ಥಿಗಳ ನೇತೃತ್ವದಲ್ಲಿ ಭಗತ್ ಸಿಂಗ್ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿಕಾರಿ ನಾಯಕರ ಜೀವನ ಚರಿತ್ರೆ, ‌ಭಾರತ ಸ್ವತಂತ್ರ್ಯಕ್ಕಾಗಿ ತಮ್ಮ ಪ್ರಾಣ ಸಮರ್ಪಿಸಿದ ಹೋರಾಟಗಾರ ಜೀವನ ಚರಿತ್ರೆಯನ್ನು ಅನೇಕರು ತಿಳಿಸಿದರು.

ಕರ್ನಾಟಕ ಪ್ರಜಾಶಕ್ತಿ ಮಾನ್ವಿ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ

ದೊರೆನ್ಯೂಸ್: ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಮಾನ್ವಿ ತಾಲೂಕಿನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ  ಮಾನ್ವಿಯ ಪ್ರವಾಸಿ ಮಂದಿರದಲ್ಲಿ ಇಂದು ನಡೆಯಿತು.
ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಮುಖಂಡರೊಂದಿಗೆ ನೂತನ ಪದಾಧಿಕಾರಿಗಳು

ಜಿಲ್ಲಾಧ್ಯಕ್ಷ ಸೂರಿ ಹುಸೇನಪ್ಪ ನಾಯಕ ನೇತೃತ್ವದಲ್ಲಿ ಮಾನ್ವಿ ತಾಲೂಕು ಘಟಕದ ಮುಖಂಡರ ಸಭೆ ಕರೆಯುವ ಮೂಲಕ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಕನ್ನಡ ತಾಯಿ ಭುವನೇಶ್ವರಿ ದೇವಿಯ ಒಳಿತಿಗಾಗಿ ಕಾಯಾ ವಾಚಾ ಮನಸ್ಸಿನಿಂದ ಕೆಲಸ ಮಾಡಬೇಕು, ಕನ್ನಡ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕು, ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ಸೂರಿ ಹುಸೇನಪ್ಪ ನಾಯಕ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಕೆ.ಶ್ರೀನಿವಾಸ್ ಸಿರವಾರ, ಆಂಜನೇಯ ನಾಯಕ, ನರಸಿಂಹ ನಾಯಕ ಸೇರಿದಂತೆ ಅನೇಕರು ಇದ್ದರು.

ನೂತನ ಪದಾಧಿಕಾರಿಗಳ ವಿವರ:
ಆಂಜನೇಯ ನಾಯಕ (ತಾಲೂಕು ಅಧ್ಯಕ್ಷ), ಪ್ರದೀಪ್ ನಂದಿನಿ (ಉಪಾಧ್ಯಕ್ಷ), ಎಸ್ ಬಸವರಾಜ್ ನಾಯಕ (ಪ್ರಧಾನ ಕಾರ್ಯದರ್ಶಿ), ಸಾಗರ್ (ಸಂಘಟನಾ ಕಾರ್ಯದರ್ಶಿ), ರವಿಕುಮಾರ್ (ಖಜಾಂಚಿ), ಚಾಂದ್ ಪಾಷಾ (ಗೌರವಾಧ್ಯಕ್ಷ), ಬಸವ ಗೂಳಿ, ಮಾರುತಿ ಮುಸ್ಟೂರು, ಇಲಿಯಾಸ್, ಕಪ್ಪಗಲ್ ಬಸವ ನಾಯಕ, ಪುರುಷೋತ್ತಮ ನಾಯಕ, ಹನುಮಂತ್ರಾಯ ನಾಯಕ, ಆದಿ ನಾಯಕ, ವಿನೋದ ಕುಮಾರ್, ವೀರೇಶ್ ನಾಯಕ, ಶಿವಕುಮಾರ್ ನಾಯಕ, ಶರಣಯ್ಯ ಸ್ವಾಮಿ, ಈರಣ್ಣ,  ಹುಸೇನಿ, ಮಹಾದೇವ, ಅಶೋಕ ಕುಮಾರ್, ಶಿವರಾಜ್ ಎಟಿಎಂ, ರಮೇಶ್, ಚೆನ್ನ, ಮೆಹಬೂಬ್, ಇಸ್ಮಾಯಿಲ್, ವೀರೇಶ್ ನಾಯಕ ಎಲ್ಎಲ್ಬಿ (ಸದಸ್ಯರು).
ವರದಿ: ಅಂಬಣ್ಣ ನಾಯಕ ಉಮಳಿ ಹೊಸೂರು

Thursday, September 27, 2018

ವಚನಕಾರರು, ದಾಸರು ಮಾಡಿದ ಹೋರಾಟ ಅವಿಸ್ಮರಣೀಯ: ಪ್ರೊ. ಬಸವರಾಜ ಕಲ್ಗುಡಿ

ದೊರೆನ್ಯೂಸ್ (ಕಲಬುರಗಿ):  ಮಧ್ಯಕಾಲೀನ ಸಂದರ್ಭದಲ್ಲಿ ಸಮಾಜೋಧಾರ್ಮಿಕ ಅಂಧ ಶ್ರದ್ಧೆ ಮೌಢ್ಯಗಳನ್ನು ತೊಡೆದು ಹಾಕಲು ಹನ್ನೆರಡನೆಯ ಶತಮಾನದ ವಚನಕಾರರು ಹಾಗೂ ೧೬ನೇ ಶತಮಾನದ ದಾಸರು ಮಾಡಿದ ಹೋರಾಟ ಅವಿಸ್ಮರಣೀಯ ಎಂದು ಖ್ಯಾತ ವಿಮರ್ಶಕರಾದ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.
ಖ್ಯಾತ ವಿಮರ್ಶಕರಾದ ಪ್ರೊ. ಬಸವರಾಜ ಕಲ್ಗುಡಿ ಮಾತನಾಡುತ್ತಿರುವುದು.

ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಕನ್ನಡ ಅಧ್ಯಾಯನ ಸಂಸ್ಥೆಯು  ಸಾಹಿತಿ ದಿ. ಭೀಮಶೇನರಾವ ಕುಲಕರ್ಣಿ ತಲೇಖಾನ ಸ್ಮಾರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದ ಅವರು, ಭಾರತದ ಎರಡು ಧಾರೆಗಳಲ್ಲಿ ಭಕ್ತಿ ಚಳವಳಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ವಚನಕಾರರು ಸಮಾಜ ಮುಖಿಯಾಗಿ, ದಾಸರು ವ್ಯಕ್ತಿ ನೆಲೆಯ ಪರಂಪರೆಯೊಳಗೇ ಅಂತರ ಮುಖಿಯಾಗಿ ಭಕ್ತಿ ಚಳವಳಿ ನಡೆಸಿದರು.
ವಚನಕಾರರು ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿ ಮೂಢ ನಂಬಿಕೆ ಕುರಿತು ವೈಚಾರಿಕವಾಗಿ ಮಾತನಾಡಿದ್ದಲ್ಲದೆ. ಕಾಯಕ ದಾಸೋಹ ಮೂಲಕ ಸಮಾಜಿಕ ಸಮಾನತೆಗಾಗಿ ಶ್ರಮಿಸಿದರು.
ಕೀರ್ತನಕಾರರಲ್ಲಿ ವಚನಕಾರರಷ್ಟು ಹೋರಾಟ ಸ್ವರೂಪ ಕಾಣುವುದಿಲ್ಲವಾದರೂ ಇದ್ದ ವ್ಯವಸ್ಥೆಯೊಳಗೇನೇ ತಮ್ಮ ಪ್ರಗತಿ ಪರ ವಿಚಾರಗಳಿಂದ ಮಾಢ್ಯ ನಿವಾರಣೆಗೆ ಶ್ರಮಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಯಿಸಿ ಮಾತನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ವಚನ ಮತ್ತು ದಾಸ ಸಾಹಿತ್ಯ ಸಮಾಜಿಕ ಅವರಣದಲ್ಲಿ ಇಟ್ಟು ನೋಡಬೇಕು. ಯಾವುದು ಸಮಾಜ ಮುಖಿಯಾಗಿರುತ್ತದೆಯೇ ಅದು ಉಳಿಯುತ್ತದೆ. ಜನರನ್ನು ಅಪ್ಪಿಕೊಳ್ಳುತ್ತದೆ. ಯಾವುದೇ ಚಿಂತನೆ ಅದು ಜನರನ್ನ ಅಪ್ಪಿಕೊಳ್ಳಬೇಕು ಎಂದರು.
ದತ್ತಿ ದಾನಿಗಳಾದ ಡಾ. ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು, ಡಾ. ಹಣಮಂತ ಮೇಲಕೇರಿ ನಿರೂಪಿಸಿದರು. ಈ ಸಂದರ್ಭದಲ್ಲಿ  ನಾಟಕಕಾರಾದ  ಶಂಕ್ರಯ್ಯ ಘಂಟಿ, ವಿಮರ್ಶಕ ಡಾ. ಶ್ರೀಶೈಲ ನಾಗರಾಳ ಸೇರಿದಂತೆ ಅನೇಕರು ಇದ್ದರು.

ಇತನ ರಕ್ಷಣೆ ಯಾರ ಹೊಣೆ...? ಅನಾಥ, ಮಾನಸಿಕ ಅಸ್ವಸ್ಥತನ ಕಥೆ ಕೇಳುವವರು ಇಲ್ಲವೇ..?

ದೊರೆನ್ಯೂಸ್: ಈ ಪೋಟೋಗಳಲ್ಲಿ ನೋಡುತ್ತಿದ್ದಿರಲ್ಲ ಈ ವ್ಯಕ್ತಿಯನ್ನು, ಇತನ ಜೀವನದ ಬಗ್ಗೆ ಕೂಡ ಸ್ವಲ್ಪ ತಿಳಿದುಕೊಳ್ಳಿ.
ಲಿಂಗಸುಗೂರು - ರಾಯಚೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಲಿಂಗಸುಗೂರಿನ ಸಮೀಪ ಕಾಣಸಿಗುವ ಮಾನಸಿಕ ಅಸ್ವಸ್ಥ, ಅನಾಥ ವ್ಯಕ್ತಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ಸಮೀಪದ ರಾಯಚೂರು - ಲಿಂಗಸುಗೂರಿನ ಮುಖ್ಯರಸ್ತೆಯಲ್ಲಿ ಲಿಂಗಸುಗೂರಿನಿಂದ ಮೂರ್ನಾಲ್ಕು ಕಿಮೀ ದೂರದಲ್ಲಿ ಈ ವ್ಯಕ್ತಿ ಕಾಣಸಿಗುತ್ತಾನೆ. ಈ ಮೊದಲು ಆತ ಪಾಮನಕಲ್ಲೂರು, ಚಿಕ್ಕಹೆಸರೂರು, ಸರ್ಜಾಪುರ, ಕುಪ್ಪೆಗುಡ್ಡಗಳ ರಸ್ತೆ ಪಕ್ಕದ ಹೊಲಗಳಲ್ಲಿ ಕಾಣಸಿಗುತ್ತಿದ್ದ, ಹೊಲಗಳ ಜನರು ತೊಂದರೆ ಕೊಡಲು ಶುರುಮಾಡಿದ ನಂತರ ರಸ್ತೆಯ ಪಕ್ಕದಲ್ಲಿಯೇ ಕಾಣಿಸುತ್ತಿದ್ದಾನೆ.
ಹೌದು ಪಾಪ ಆತನೊಬ್ಬ ಮಾನಸಿಕ ಅಸ್ವಸ್ಥ, ಅನಾಥ ರಸ್ತೆಯೇ ಆತನ ಮನೆ, ಜೊತೆಗಿರುವ ಎರಡು ಚೀಲಗಳೆ ಆತನ ರಕ್ಷಣಾ ಕವಚಗಳು ಅಂದಹಾಗೇ ಆತನಿಗೆ ಆಹಾರ, ಊಟ, ಉಪಚಾರವಂತು ರಸ್ತೆಯಲ್ಲಿ ಹೋಗಿಬರುವ ಕೆಲವರು ಹೃದಯವಂತರು ತಮ್ಮಲ್ಲಿದ್ದ ನೀರು, ಬ್ರೇಡ್, ಬಿಸ್ಕೆಟ್, ಬಾಳೆಹಣ್ಣು, ಅಲ್ಪಸ್ವಲ್ಪ ಉಪಹಾರ ಊಟವನ್ನು ನೀಡಿ ಹೋಗುತ್ತಿರುತ್ತಾರೆ. ಅದರಲ್ಲಿಯೇ ಜೀವನ ಸಾಗಿಸುವ ಆತನಿಗೆ ಬಿಸಿಲು, ಮಳೆ, ಬಿರುಗಾಳಿಗಳು ಲೆಕ್ಕಕ್ಕೆ ಇಲ್ಲ.
ಮಳೆಯ ಬರಲಿ, ಬಿಸಿಲೇ ಇರಲಿ ತನ್ನಲ್ಲಿನ ಎರಡು ರಕ್ಷಣಾ ಕವಚಗಳಂತ್ತಿರುವ ಹರಿದ ಚೀಲಗಳು ಮಾತ್ರ ಗತಿ. ಅವುಗಳಿಂದಲ್ಲೇ ರಕ್ಷಣೆ ಮಾಡಿಕೊಳ್ಳುತ್ತಾನೆ. ಹಗಲು, ರಾತ್ರಿಯ ಪರಿವೇ ಇಲ್ಲದ ಆತ ಮಳೆ, ಚಳೆ ಎನ್ನದೇ ರಸ್ತೆಯ ಪಕ್ಕಕ್ಕೆ ಬಿದ್ದಿರುತ್ತಾನೆ. 
ದುರ್ದೈವದ ಸಂಗತಿ ಏನೆಂದರೆ, ಆತ ಸುಮಾರು ತಿಂಗಳುಗಳಿಂದ ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆಯಲ್ಲಿಯೇ ಕಾಲ ಕಳೆಯುತ್ತಾ ಬಂದಿದ್ದರು ಕೂಡ ಯಾರೊಬ್ಬರು ಆತನ ಬಗ್ಗೆ ಕೇರ್ ಮಾಡಿಲ್ಲ ಎಂಬುದಾಗಿದೆ.
ಹೌದು ಅನಾಥರಿಗೆ, ನಿರ್ಗತಿಕರಿಗೆ, ಮಾನಸಿಕ ಅಸ್ವಸ್ಥತರಿಗಾಗಿಯೇ ಸರ್ಕಾರ ಅನೇಕ ಇಲಾಖೆಗಳನ್ನು ಮಾಡಿದೆ, ಇನ್ನೂ ಅನೇಕ ಸಹಕಾರ ಸಂಘಗಳು ಇವೆ, ಅಲ್ಲದೇ ಸರ್ಕಾರ ಅನೇಕ ದೂರವಾಣಿ ಸಹಾಯಕ ಕೇಂದ್ರಗಳನ್ನು ಮಾಡಿದೆ ಇಷ್ಟೆಲ್ಲಾ ಇದ್ದಮೇಲೆ ಕೂಡ ಆತ ಇನ್ನೂ ಅನಾಥನಾಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ಎನ್ನಬಹುದಾಗಿದೆ.
ಇದು ರಾಯಚೂರು - ಬೆಳಗಾವಿ ಮುಖ್ಯರಸ್ತೆಯಾಗಿದ್ದು ಏನಿಲ್ಲವೆಂದರೂ ದಿನಕ್ಕೆ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ತೆರಳುತ್ತವೆ. ನೂರಾರು ಅಧಿಕಾರಿಗಳು ಜನಪ್ರತಿನಿಧಿಗಳು ಇದೇ ಮಾರ್ಗದಲ್ಲಿ ತಿರುಗುತ್ತಾರೆ, ಅಲ್ಲದೇ ರಸ್ತೆ ಪಕ್ಕದಲ್ಲಿ ಸಸಿಗಳನ್ನು ನಾಟಿ ಮಾಡಿದ ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಆ ಅನಾಥನ ಮುಂದುಗಡೆಯೇ ತಿರುತ್ತಾರೆ ಆದರೇ ಇವರ್ಯಾರು ಕೂಡ ಆತನ ಬಗ್ಗೆ ಕೇರ್ ಮಾಡುತ್ತಿಲ್ಲ. 
ಸರ್ಕಾರ ರಚಿಸಿದ ಅನೇಕ ಇಲಾಖೆಗಳು, ಅಧಿಕಾರಿಗಳು ಹೆಸರಿಗೆ ಮಾತ್ರವೇ ಇದ್ದಾರೆಯೇ..? ಭಾಷಣಗಳಲ್ಲಿ ದೊಡ್ಡದೊಡ್ಡ ಮಾತುಗಳನ್ನಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಷಣಗಳಿಗೆ ಮಾತ್ರ ಸೀಮಿತವೇ..? ಇಂತವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಸಬೇಕಾದವರು ಯಾರು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು..? ಎಂಬುದು ಅನೇಕರ ಮನದಾಳದ ಮಾತುಗಳಾಗಿವೆ. 
ಈಗಲಾದರೂ ಸಂಬಂದಿಸಿದ ಅಧಿಕಾರಿಗಳು, ಇಲಾಖೆಗಳು ಆ ಅನಾಥ, ಮಾನಸಿಕ ಅಸ್ವಸ್ಥತನ ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕಾಗಿದೆ. 

ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

ಆಧಾರ್ ಗಾಗಿ ಹಗಲು ರಾತ್ರಿ... ಏನಿದು ಕಥೆ..?

ದೊರೆನ್ಯೂಸ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನಕೊಂದು ಆದೇಶ, ಯೋಜನೆಗಳನ್ನು ಬದಲಾಯಿಸುವ ಮೂಲಕ ಬಡಜನರನ್ನು ಸಾರ್ವಜನಿಕರನ್ನು ಒಂದಿಲ್ಲ ಒಂದು ರೀತಿಯ ಸಮಸ್ಯೆಗಳಿಗೆ ಸಿಲುಕಿಸುತ್ತಿವೆ.
ಹೌದು ಈ ಮೊದಲು ಆಧಾರ್ ಕಾರ್ಡ್ ಗಳನ್ನು ಖಾಸಗಿ ಆನ್ಲೈನ್ ಸೆಂಟರ್ ಗಳಲ್ಲಿ ಪಡೆದುಕೊಳ್ಳುವ ಅವಕಾಶವಿತ್ತು. ತದನಂತರ ಕೇವಲ ಸರ್ಕಾರ ಗುರುತಿಸಿದ ಸೇವಾ ಕೇಂದ್ರಗಳಾದ ಪೋಸ್ಟ್ ಆಫೀಸ್, ಕೆಲವೊಂದು ಬ್ಯಾಂಕ್ ಗಳಲ್ಲಿ ಮಾತ್ರ ಆಧಾರ್ ಕಾರ್ಡ್ ಪಡೆದುಕೊಳ್ಳುವ ಅವಕಾಶ ನೀಡಿದೆ. ಸರ್ಕಾರದ ಈ ನಡೆಯಿಂದ ಜನರು ಹಗಲು, ರಾತ್ರಿ ಎನ್ನದೇ ಆಧಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಧಾರ್ ಕಾರ್ಡ್ ಬೇಕಾದವರು ರಾತ್ರಿ ಪೂರ್ತಿ ಸೇವಾ ಕೇಂದ್ರಗಳ ಮುಂದೆ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸುವುದು, ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳು ಈ ನಿಗಧಿತ ಕೇಂದ್ರಗಳಿಗೆ ಸೀಮಿತವಾಗಿದ್ದರಿಂದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆಧಾರ್ ಕಾರ್ಡ್ ಪಡೆಯುವ ಟೋಕನ್ ಗಾಗಿ ವಾರಗಟ್ಟಲೇ ಹಗಲು ರಾತ್ರಿ ಎನ್ನದೇ ಬ್ಯಾಂಕ್, ಪೋಸ್ಟ್ ಆಫೀಸ್ ಬಾಗಿಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿ ಕೂಡ ದಿನಕ್ಕೆ ಇಪ್ಪತ್ತು, ಮೂವತ್ತು ಅರ್ಜಿ ಪಾರ್ಮ್, ಟೋಕನ್ ನೀಡುವುದರಿಂದ ನೂರಾರು ಜನ ಸೇರಿದ ಜನರು ಮತ್ತೆಮತ್ತೆ ನಿರಾಸೆಯಿಂದ ಮನೆ ಸೇರುವ ದುಸ್ಥಿತಿ ಆಧಾರ್ ಕೇಂದ್ರಗಳಲ್ಲಿದೆ.
ಅಂತಹ ಸಮಸ್ಯೆಗಳಿಗೆ ಲಿಂಗಸುಗೂರು ವರತಾಗಿಲ್ಲ. ಲಿಂಗಸುಗೂರಿನಲ್ಲಿ ಒಂದು ಬ್ಯಾಂಕ್, ಮತ್ತು ಪೋಸ್ಟ್ ಆಫೀಸ್ ನಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳಿದ್ದು ಐಬಿ ಮುಂದಿನ ಎಸ್ಬಿಐ ಬ್ಯಾಂಕ್ ಮತ್ತು ಸರ್ಕಾರಿ ಆಸ್ಪತ್ರೆ ಹತ್ತಿರದ ಪೋಸ್ಟ್ ಆಫೀಸ್ ಗಳ ಬಾಗಿಲುಗಳನ್ನು ಸಾರ್ವಜನಿಕರು ಹಗಲು ರಾತ್ರಿ ಕಾಯುವಂತಾಗಿದೆ.
ಲಿಂಗಸುಗೂರಿನ ಆಧಾರ್ ಸೇವಾ ಕೇಂದ್ರಗಳಲ್ಲಿ ಟೋಕನ್ ಪಡೆದುಕೊಳ್ಳಲು ಬೆಳಂಬೆಳಿಗ್ಗೆ ಸೇರಿದ ಜನರು.

ಸುತ್ತಲೂ ಸುಮಾರು ಹತ್ತಿಪ್ಪತ್ತು ಕಿಮೀ ದೂರದ ವಿವಿಧ ಊರುಗಳಿಂದ ಬರುವ ಜನರು ರಾತ್ರೋ ರಾತ್ರಿ ಬಾಗಿಲು ಕಾಯುವುದು ಸುಮಾರು ದಿನಗಳಿಂದ ಸರ್ವೇ ಸಾಮಾನ್ಯ ಎನ್ನುವಂತಾಗಿದ್ದು ಸರ್ಕಾರವಾಗಲಿ, ಸಂಬಂದಿಸಿದ ಇಲಾಖೆಯಾಗಲಿ ಆ ಬಗ್ಗೆ ತಲೆ ಕಡೆಸಿಕೊಳ್ಳುತ್ತಿಲ್ಲ ಎಂಬುದು ಅನೇಕರ ನೋವಿನ ಮಾತಾಗಿದೆ.
ಇನ್ನೂ ಆಧಾರ್ ಸೇವಾ ಕೇಂದ್ರದ ಅಧಿಕಾರಿಗಳು ನೀಡುವ ಉಢಾಪೆ ಉತ್ತರಗಳು ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಉಂಟಾಗುವಂತೆ ಮಾಡುತ್ತಿದ್ದು ಅಧಿಕಾರಿಗಳು ಮಾತ್ರ ಜಾಣಕುರುಡು ನಡೆ ಅನುಸರಿಸುವ ಮೂಲಕ ನಿದ್ರೆಗೆ ಜಾರಿದವರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಆಧಾರ್ ಸೇವಾ ಕೇಂದ್ರಗಳನ್ನು ಸುಧಾರಿಸುವತ್ತ ಸಂಬಂಧಿಸಿದವರು ಗಮನವಹಿಸಲಿ.
ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

ಶಾಸಕ ಪ್ರತಾಪಗೌಡ ಪಾಟೀಲ್ ರ ಜನ್ಮದಿನದ‌ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್

ದೊರೆನ್ಯೂಸ್: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ರ ಜನ್ಮ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಅ.೦೧ರಂದು ಮಸ್ಕಿಯ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಾಪಗೌಡ ಪಾಟೀಲ್ ಯುವ ಸೇನಾ ಗೌರವಾಧ್ಯಕ್ಷ ಚೇತನ್ ಪಾಟೀಲ್ ಹೇಳಿದ್ದಾರೆ.
ರಕ್ತದಾನ ಶಿಬಿರವು ಸಿಂಧನೂರಿನ ಶ್ರೀ ಶಕ್ತಿ ರಕ್ತ ಭಂಡಾರದ ಸಂಯುಕ್ತಾಶ್ರಯದಲ್ಲಿ ನಡೆಯಲಿದ್ದು,  ಶಿಬಿರದ ಸಂಪೂರ್ಣ ಮಾಹಿತಿಗಾಗಿ 9741740998, 9986813725, 9591620081 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಾಪಗೌಡ ಪಾಟೀಲ್ ಯುವ ಸೇನಾ ಗೌರವಾಧ್ಯಕ್ಷ ಚೇತನ್ ಪಾಟೀಲ್ 

ಮಸ್ಕಿ ಕ್ಷೇತ್ರದಿಂದ ಸತತವಾಗಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಜನಪ್ರಿಯತೆ ಪಡೆದಿರುವ ಶಾಸಕ ಪ್ರತಾಪಗೌಡ ಪಾಟೀಲ್ ರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರಕ್ತದಾನ ಶಿಬಿರ ಬೇರೆಯವರಿಗೂ ಮಾದರಿಯಾಗಿಲಿ, ಜನಪ್ರತಿನಿಧಿಗಳ ಜನ್ಮದಿನದಂದು ದುಂದುವೆಚ್ಚ ಮಾಡಿ ಅರ್ಥವಿಲ್ಲದ ಬರ್ತಡೇ ಮಾಡಿಕೊಳ್ಳುವ ಬದಲು ಸಮಾಜಕ್ಕೆ ಒಳ್ಳೆಯದಾಗುವ ಮಾದರಿ ಕೆಲಸವನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತಾಗಲಿ ಎಂಬುದು ದೊರೆನ್ಯೂಸ್ ನ ಆಶಯವಾಗಿದೆ.

Tuesday, September 25, 2018

ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ....

ದೊರೆನ್ಯೂಸ್: ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿ ಹೈದರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ  ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಮಾನ್ವಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳು : ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ನಾಯಕರು
ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ್ದನ್ನು ಕಂಡಿಸಿ ಮಾನ್ವಿ ತಹಶಿಲ್ದಾರರಿಗೆ ಮನವಿ ಸಲ್ಲಿಸುತ್ತಿರುವ ವಾಲ್ಮೀಕಿ ನಾಯಕ ಸಮಾಜದ ಮುಖಂಡರು
ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸಬೇಕು, ಅವರಿಗೆ ಕಠೀಣ ಶಿಕ್ಷೆ ನೀಡಬೇಕು. ಮುಂದಿನ ದಿನಗಳಲ್ಲಿ ಅಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಮಣ್ಣ ನಾಯಕ,  ಗಿರಿ ನಾಯಕ, ಕೊಂಡಯ್ಯ ನಾಯಕ, ಅಂಬಣ್ಣ ನಾಯಕ,  ನರಸಣ್ಣ ದೊರೆ, ರಾಮೇಶ ನಾಯಕ,  ಸೇರಿದಂತೆ ಅನೇಕರು ಇದ್ದರು.

Monday, September 24, 2018

ಮೊಹರಂ ಪದ ಹಾಡುವ ಮೂಲಕ ಜನಮೆಚ್ಚುಗೆ ಪಡೆದ ಗೆಜ್ಜಲಗಟ್ಟ ಗ್ರಾಮಸ್ಥರು

ದೊರೆನ್ಯೂಸ್: ಜನಪದ ಹಾಡು, ಸಾಹಿತ್ಯದ ಆಸಕ್ತಿ ಇಂದಿನ ಯುವ ಸಮುದಾಯದಲ್ಲಿ ಕುಸಿಯುತ್ತಿದ್ದು, ಮೊಬೈಲ್, ಇಂಟರ್ನೆಟ್ ಗೆ ಯುವಜನತೆ ಮಹತ್ವ ನೀಡುತ್ತಿದ್ದಾರೆ. ಇಂತಹ ದಿನಗಳಲ್ಲಿ ಮೊಹರಂ ಪದ ಹಾಡುವ ಮೂಲಕ ಜನಮೆಚ್ಚುಗೆ ಪಡೆದ ತಂಡವೊಂದರ ಸ್ಟೋರಿ ಇಲ್ಲಿದೆ.
ಹೌದು ಮೊಹರಂ ಹಬ್ಬದ ಸಂದರ್ಭದಲ್ಲಿ ಮೊಹರಂ ಪದಗಳನ್ನು ಹಾಡುವುದು ಕೆಲವು ಗ್ರಾಮಗಳಲ್ಲಿ ಇನ್ನೂ ಕೂಡ ಕಾಣಬಹುದಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶ ಭಾಗದ ರಾಯಚೂರು ಜಿಲ್ಲೆಯಲ್ಲಿ ಮೊಹರಂ ಪದಗಳಿಗೆ ಹೆಚ್ಚಿನ ಮಹತ್ವ ಇದೆ. ಮೊಹರಂ ಪದಗಳಲ್ಲಿ ಮಾನವ ಸಮಾಜಕ್ಕೆ ಉತ್ತಮ  ಸಂದೇಶ ನೀಡುವಂತ ಶಕ್ತಿಯಿದ್ದು, ಆ ಹಾಡುಗಳನ್ನು ಹಾಡುವ ಮೂಲಕ‌ ಜನರಿಗೆ ಒಳ್ಳೆಯದನ್ನು ಹೇಳಿಕೊಡುವ ಕೆಲಸ ಈ ಭಾಗದಲ್ಲಿ ಸಾಗುತ್ತಿದೆ.
ಮೊಹರಂ ಪದಗಳನ್ನು ಹಾಡುವ ತಂಡಗಳಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮಸ್ಥರ ತಂಡ ಮಹತ್ವದಾಗಿದೆ. ಗೆಜ್ಜಲಗಟ್ಟ ಗ್ರಾಮಸ್ಥರು ಈಗಾಗಲೇ ಅನೇಕ ಕಡೆಗಳಲ್ಲಿ ಮೊಹರಂ ಪದಗಳನ್ನು ಹಾಡುವ ಮೂಲಕ ಬಹುಮಾನಗಳನ್ನು ಹಲವಾರು ವರ್ಷಗಳಿಂದ ತಮ್ಮದಾಗಿಸಿಕೊಳ್ಳುತ್ತಾ ಸಾಗಿದ್ದಾರೆ. ಅದರಂತೆ ಈ ವರ್ಷವೂ ಕೂಡ ಗೆಜ್ಜಲಗಟ್ಟ ಗ್ರಾಮಸ್ಥರು ಮೊಹರಂ ಪದಗಳನ್ನು ಹಾಡುವ ಮೂಲಕ ಬಹುಮಾನ ಪಡೆದುಕೊಂಡಿದ್ದಾರೆ.
ಮೊಹರಂ ಪದಗಳನ್ನು ಹಾಡಿದ ವೆಂಕಟೇಶ ನಾಯಕ, ಲಕ್ಷ್ಮಣ ನಾಯಕ ತಂಡದವರನ್ನು ಸನ್ಮಾನಿಸಿದ ಅಮಿನಗಡ ಗ್ರಾಮಸ್ಥರು

ಇತ್ತೀಚೆಗೆ ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಡದಲ್ಲಿ ಮೊಹರಂ ಪದ ಹಾಡುವ ಮೂಲಕ ಗೆಜ್ಜಲಗಟ್ಟ ಗ್ರಾಮದ  ವೆಂಕಟೇಶ ನಾಯಕ,  ಲಕ್ಷ್ಮಣ್ಣ ನಾಯಕರ ತಂಡ ಬಹುಮಾನ ಸನ್ಮಾನಗಳನ್ನು ಸ್ವೀಕರಿಸುವ ಮೂಲಕ ಅನೇಕರ ಮೆಚ್ಚುಗೆ ಪಡೆದುಕೊಂಡಿದೆ.
ಗ್ರಾಮೀಣ ಸಂಸ್ಕೃತಿ ಅವನತಿಯತ್ತ ಸಾಗುತ್ತಿರುವ ಇಂತಹ ದಿನಮಾನಗಳಲ್ಲಿ ಗ್ರಾಮೀಣ ಕಲೆಯನ್ನು ಕಾಪಾಡಿಕೊಂಡು ಸಾಗುತ್ತಿರುವ ಇಂತಹ ಯುವ ಸಮುದಾಯವನ್ನು ಸರ್ಕಾರ, ಸಂಬಂಧಿಸಿದವರು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ.

ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

Sunday, September 23, 2018

ಕಲಬುರಗಿ ಜಿಲ್ಲೆಯಲ್ಲೊಂದು ಪುರಾತನ ದೇವಾಲಯ ಪತ್ತೆ

ದೊರೆನ್ಯೂಸ್: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಪುರಾತನ ದೇವಾಲಯವೊಂದು ಪತ್ತೆಯಾಗಿದೆ.
ಈ ದೇವಾಲಯವು ರಾವೂರ ಗ್ರಾಮದ ಕನಕನಗರದಲ್ಲಿದ್ದು  ಎಂಟನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಟ್ಟಿರಬಹುದೆಂದು ಅಂದಾಜಿಸಲಾಗಿದೆ.
48 ಕಂಬಗಳಿಂದ ಕೂಡಿದ ಈ ದೇವಾಲಯ ಗಿಡಮರಗಳಿಂದ ತುಂಬಿದ್ದು, ಸಂಪೂರ್ಣ ಭೂಮಿಯ ಒಳಗಡೆ ಮುಳುಗಿ ಹೋಗಿದೆ. ಇತ್ತೀಚೆಗೆ ದೇವಾಲಯ ಪತ್ತೆಯಾಗಿದ್ದು ಗ್ರಾಮಸ್ಥರು ಸೇರಿದಂತೆ ಅನೇಕರಿಗೆ ಕುತೂಹಲದ ಜೊತೆಗೆ ಆಶ್ಚರ್ಯಕರವೆನಿಸಿದ್ದು, ದೇವಾಲಯ ನೋಡಲು ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ರಾವೂರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
ದೇವಾಲಯ ಪತ್ತೆಯಾದದ್ದು ಹೇಗೆ..?
ರಾವೂರ ಗ್ರಾಮದ ಕನಕನಗರದಲ್ಲಿರುವ ಪುರಾತನ ದೇವಾಲಯ ಪತ್ತೆಯ ಹಿಂದೆ‌ ತನ್ನದೆಯಾದ  ಕಥೆಯಿದೆ. ಗ್ರಾಮದ ಕನಕನಗರದ ಯುವಕರು ತಿಪ್ಪೆಗುಂಡಿಯಲ್ಲಿನ ಗೊಬ್ಬರ (ಕಸ) ವನ್ನು ಟ್ರಾಕ್ಟರ್ ಗಳಿಗೆ ತುಂಬಿ ಹೊಲಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ತಿಪ್ಪೆಯಲ್ಲಿ ಕಸ ಖಾಲಿಯಾಗುತ್ತಿದ್ದಂತೆ ಕೆಳಗಡೆ ಅಗೆದು ತೆಗೆಯುವಾಗ ದೇವಸ್ಥಾನದ ಒಂದು ಭಾಗದ ಕಂಬ ದೊರೆತಿದೆ. ನಂತರ ಆಶ್ಚರ್ಯ ಮತ್ತು ಕುತೂಹಲದಿಂದ ಮತ್ತೆಮತ್ತೆ ನೆಲ ಅಗೆಯುವ ಕೆಲಸದಲ್ಲಿ ನಿರತರಾದಾಗ ಒಂದೊಂದು ಕಂಬ ಕಾಣತೋಡಗಿದ್ದು ನಂತರ ದೇವಸ್ಥಾನ ಇದೆ ಎಂದು ಗೋತ್ತಾಗಿದೆ.
ದೇವಸ್ಥಾನ ಇದೇ ಎಂದು ಗೋತ್ತಾಗುತ್ತಿದ್ದಂತೆ ಗ್ರಾಮದ ಕನಕನಗರ ನಿವಾಸಿ ಜಗದೇಶ ಪೂಜಾರಿ ರಾವೂರ ಮತ್ತು ತಂಡದವರು ಅದರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ದೇವಸ್ಥಾನದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ದೇವಸ್ಥಾನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದೇ ಗ್ರಾಮದಲ್ಲಿ ಈಗಾಗಲೇ ಅನೇಕ‌ ಐತಿಹಾಸಿಕ ದೇವಸ್ಥಾನಗಳು ಪತ್ತೆಯಾಗಿದ್ದು, ಇದು ಕೂಡ ಐತಿಹಾಸಿಕ ದೇವಾಲಯ ಇರಬಹುದು ದೇವಸ್ಥಾನವನ್ನು ಸ್ವಚ್ಚಗೊಳಿಸಿ ಜೀರ್ಣೋದ್ಧಾರ ಮಾಡಲು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಸಹಕಾರ ನೀಡಬೇಕೆಂದು ಜಗದೀಶ್ ಪೂಜಾರಿ ರಾವೂರ ಮನವಿ ಮಾಡಿಕೊಂಡಿದ್ದಾರೆ.

Saturday, September 22, 2018

ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳು : ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ನಾಯಕರು

ದೊರೆನ್ಯೂಸ್:  ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಕಿಡಿಗೇಡಿಗಳು ಕಲ್ಲಿನಿಂದ ಭಗ್ನಗೊಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯ ತಿಳಿಯುತ್ತಿದ್ದಂತೆ ವಾಲ್ಮೀಕಿ ನಾಯಕ ಜನಾಂಗದ ಯುವಕರು ರಾಜ್ಯಹೆದ್ದಾರಿ ಬಂದ್ ಮಾಡಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.



ಈ ವೇಳೆ ಸೇರಿದ್ದ ಸಾವಿರಾರು ಜನರು ಗಂಗಾವತಿ -ತಾವರಗೇರಾ ರಸ್ತೆ ತಡೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಬಂದ್ ಮಾಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಲ್ಮೀಕಿ ಸಮಾಜದ ಮುಖಂಡರನ್ನು ಸಮಾಧಾನ ಪಡಿಸುವ ಕಾರ್ಯಮಾಡಿದ್ದಾರೆ.
ನೀವು ಎಷ್ಟೇ ಹೇಳಿದ್ರು ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ, ಸಮಾಜಕ್ಕೆ ಅಪಮಾನವಾಗಿದೆ, ಮಹರ್ಷಿ ವಾಲ್ಮೀಕಿ ಮೂರ್ತಿ ಅಪಮಾನಗೊಳಿಸಿದವರನ್ನು ಕೂಡಲೇ ಬಂಧಿಸಬೇಕೆಂದು ವಾಲ್ಮೀಕಿ ಸಮಾಜದ ಯುವಕರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಪ್ಪಿತಸ್ಥರನ್ನು ಬಂಧಿಸುತ್ತೇವೆಂದು ಹೇಳಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ.
ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ ಸುದ್ದಿ ವೈರಲ್ ಆಗುತ್ತಿದ್ದು, ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಸೋಮವಾರ ಉಗ್ರ ಹೋರಾಟ ಮಾಡಲಾಗುತ್ತದೆಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಗೌಡೂರು ಶಾಲೆಯ ಬಾಲಕಿಯರು



ದೊರೆನ್ಯೂಸ್: ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಶಾಲೆಯ ಮಕ್ಕಳು ಆಯ್ಕೆಯಾಗಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡೂರಿನ ಮಾಲಶ್ರೀ ಮತ್ತು ಜ್ಯೋತಿ ಎಂಬ ಬಾಲಕಿಯರು ರಾಜ್ಯಮಟ್ಟದ ೧೪ ಮತ್ತು ೧೭ ವರ್ಷದ ವಯೋಮಿತಿಯ ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯ ಮೂಲಕ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದು. ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಹೆಚ್ಚಳಕ್ಕೆ ಗೌಡೂರು ಶಾಲೆಯ ಬಾಲಕಿಯರು ಕಾರಣವಾದಂತಾಗಿದೆ.
ಬಾಲಕಿಯರ ಸಾಧನೆಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ಅಭಿನಂದನೆಗಳು ಕೇಳಿಬರುತ್ತಿವೆ. ಇತ್ತ ನಮ್ಮ ಸಮಾಜದ ಬಾಲಕಿಯರು ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆಂದು  ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಕಿಯರ ಸಾಧನೆಗೆ ಗೌಡೂರು ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಲಿಂಗಸುಗೂರು ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Thursday, September 20, 2018

ಕಕ್ಕಲದೊಡ್ಡಿಯಲ್ಲಿನ ನಕಲಿ ಜಾತಿ ಪ್ರಮಾಣ ಪತ್ರ ತಡೆಗಟ್ಟಿ: ರಾಚಣ್ಣ ನಾಯಕ

ದೊರೆನ್ಯೂಸ್ (ದೇವದುರ್ಗ): ತಾಲೂಕಿನ ಕಕ್ಕಲದೊಡ್ಡಿ ಗ್ರಾಮದಲ್ಲಿ ಅನೇಕರು ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಶಾಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು ಆ ಬಗ್ಗೆ ತನಿಖೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕರಿಗಳಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರು ಮನವಿ ಸಲ್ಲಿಸಿದರು. 
ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಮುಖಂಡ ರಾಚಣ್ಣ ನಾಯಕ, ಕೊಕ್ಕಲದೊಡ್ಡಿಯಲ್ಲಿ ಅನ್ಯ ಸಮಾಜದ ಒಂದು ಕುಟುಂಬದಲ್ಲಿ ಅನೇಕ ಸದಸ್ಯರು ಪರಿಶಿಷ್ಟ ಪಂಗಡ ನಾಯಕ, ವಾಲ್ಮೀಕಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದರು. 

ಜಿಲ್ಲೆಯಲ್ಲಿ ಅದರಲ್ಲೂ ದೇವದುರ್ಗ ತಾಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಶಾಲಾ ದಾಖಲೆಗಳನ್ನು ಬೇಕಾಬಿಟ್ಟಿ ತಿದ್ದುಪಡಿ ಮಾಡಿ ಪರಿಶಿಷ್ಟ ಪಂಗಡ ಜನಾಂಗಕ್ಕೆ ಮೋಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ವಾಲ್ಮೀಕಿ, ನಾಯಕ, ಬೇಡ, ಜನಾಂಗ ಹೆಚ್ಚಾಗಿದ್ದರು ಅನೇಕರು ಅನ್ಯ ಜಾತಿಯವರು ಮೋಸ ಮಾಡುತ್ತಿದ್ದು ಅಂತವರನ್ನು ಪತ್ತೆ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕೆಲಸ ನಡೆದಿದೆ.
ಶಾಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ವಾಲ್ಮೀಕಿ ಸಮಾಜಕ್ಕೆ, ಸಂವಿಧಾನಕ್ಕೆ, ಸರ್ಕಾರಕ್ಕೆ ವಂಚನೆ ಮಾಡುವರ ಮೇಲೆ ಮತ್ತು ಶಾಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲು ಮಾಡಲು ಸಹಕರಿಸಿದ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ಮೇಲೆ  ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರಾಚಣ್ಣ ನಾಯಕ ತಿಳಿಸಿದರು. ಸಮಾಜದ ಅನೇಕರು ಇದ್ದರು.

Wednesday, September 19, 2018

ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ಮತ್ತು ನೀಡಿದವರ ಮೇಲೆ ಕ್ರಮಕೈಗೊಳ್ಳಿ

(ಅಯ್ಯಣ್ಣ ನಾಯಕ ಪಾಮನಕಲ್ಲೂರು)
ದೊರೆನ್ಯೂಸ್ (ಲಿಂಗಸುಗೂರು): ಪರಿಶಿಷ್ಟ ಪಂಗಡ ದವರೆಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರು ಹಾಗೂ ಪಡೆದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು  ಹೈದ್ರಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರು ಆಗ್ರಹಿಸಿದ್ದಾರೆ. 
ಬುಧವಾರ ಸಹಾಯಕ ಆಯುಕ್ತರ ಕಚೇರಿ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಲಿಂಗಸಗೂರು ತಾಲೂಕಿನಲ್ಲಿ ಪರಿಶಿಷ್ಟ ಪಂಗಡದವರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಅನ್ಯ ಜಾತಿಯ ಜನರು ಪರಿಶಿಷ್ಟ ಪಂಗಡದವರೆಂದು ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದರು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆಂದು ಆರೋಪಿಸಿದರು.

ತಾಲೂಕಿನ ಅಡವಿಬಾವಿ, ನೀರಲಕೇರಿ, ರಾಂಪೂರ ಸೇರಿದಂತೆ ಅನೇಕ ಗ್ರಾಮದಲ್ಲಿನ ಅನ್ಯ ಜಾತಿಗೆ ಸೇರಿದ ಜನರು ಎಸ್.ಟಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು, ಪ್ರಮಾಣಪತ್ರ ಸಂಖ್ಯೆ: ಆರ್‌ಡಿ2038762068341 ಕುಮಾರ ಸದಾನಂದ ಅಮರಪ್ಪ ತಾಯಿ ದುರುಗಮ್ಮ ನೀರಲಕೇರಿ ಹಾಗೂ ಆರ್‌ಡಿ0038762131829 ಭಾಗ್ಯ ತಂದೆ ಶಿವಪ್ಪ ತಾಯಿ ದೇವಮ್ಮ ಸಾ. ಅಡವಿಬಾವಿ ಇವರು ಅನ್ಯ ಜಾತಿಗೆ ಸೇರಿದ್ದರು ಪರಿಶಿಷ್ಟ ಪಂಗಡದ ವಾಲ್ಮೀಕಿ  ಹಾಗೂ ಬೇಡರ ಎಂದು ಪ್ರಮಾಣ ಪತ್ರಗಳನ್ನು ಪಡೆದು ಸಂವಿಧಾನ ಮತ್ತು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದಾಖಲೆ ನೀಡಿದರು.
ಪರಿಶಿಷ್ಟ ಪಂಗಡದ ಮೀಸಲಾತಿ ವ್ಯಾಪ್ತಿಗೆ ಒಳಪಡದ ಜನರಿಗೆ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಅಂದಿನ ತಹಶಿಲ್ದಾರ, ನಾಡ ತಹಶಿಲ್ದಾರ, ಕಂದಾಯ ನೀರಿಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪಡೆದುಕೊಂಡವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೈದ್ರಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಅಶೋಕ ನಾಯಕ ದಿದ್ದಿಗಿ, ಶರಣಪ್ಪ ಚಿಗರಿ, ಪ್ರಕಾಶ ನಾಯಕ ಅಡವಿಬಾವಿ, ವಿಜಯಕುಮಾರ ನಾಯಕ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಗಂಗಾಧರ ನಾಯಕ ಗುಂತಗೋಳ್, ವಿಶ್ವನಾಥ ನಾಯಕ, ನಾಗರಾಜ ನಾಯಕ, ಲಕ್ಷ್ಮಣ ನಾಯಕ, ಶಶಿಧರ್ ನಾಯಕ  ಸೇರಿದಂತೆ ಅನೇಕರು ಇದ್ದರು.

Sunday, September 9, 2018

ವಾಲ್ಮೀಕಿ ವೃತ್ತವನ್ನು ವಾಲ್ಮೀಕಿ ಜಯಂತಿಯ ಮುನ್ನವೇ ಪುನರ್ ನಿರ್ಮಾಣ ಮಾಡಿ

ದೊರೆನ್ಯೂಸ್: ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿದ್ದ ವಾಲ್ಮೀ


ಕಿ ವೃತ್ತವನ್ನು ವಾಲ್ಮೀಕಿ ಜಯಂತಿಯ ಮುನ್ನವೇ ಪುನರ್ ನಿರ್ಮಾಣ ಮಾಡಬೇಕೆಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಮುಖಂಡರು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ್ ರವರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಮೊದಲಿದ್ದ ವಾಲ್ಮೀಕಿ ವೃತ್ತವನ್ನು ಕಳೆದ ಎರಡು ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಸಲುವಾಗಿ ತೆರಳುಗೊಳಿಸಲಾಗಿದ್ದು, ಇದುವರೆಗೆ ಪುನರ್ ನಿರ್ಮಾಣ ಮಾಡಿಲ್ಲ. ವಾಲ್ಮೀಕಿ ಜಯಂತೋತ್ಸವದ ಮುನ್ನವೇ ಪುನರ್ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಶಾಸಕರು ಬರವಸೆ ನೀಡಿದ್ದಾರೆ: ಸತ್ಯಪ್ಪ ಬಸಾಪುರ್
ವಾಲ್ಮೀಕಿ ಜಯಂತೋತ್ಸವದ ಮುನ್ನವೇ ವೃತ್ತವನ್ನು ಪುನರ್ ನಿರ್ಮಾಣ ಮಾಡಲು ಸೂಚಿಸುವೆನೆಂದು ಶಾಸಕರು ಬರವಸೆ ನೀಡಿದ್ದಾರೆಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಅಧ್ಯಕ್ಷ ಸತ್ಯಪ್ಪ ಬಸಾಪುರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಅದ್ಯಕ್ಷ ಸತ್ಯಪ್ಪ ಬಸಾಪೂರ, ಉಪಾಧ್ಯಕ್ಷ ಕನಕಪ್ಪ ನಾಯಕ, ಮುಖಂಡರಾದ ಮದಕರಿ ನಾಯಕ, ಅಡಿವೇಶ್ ಹಾಜಾಳ್, ಕನಕಪ್ಪ ಅಳ್ಳಳ್ಳಿ, ಸುರೇಶ್ ಜರಕುಂಟಿ, ದ್ಯಾಮಣ್ಣ ತಳವಾರ್ ಸೇರಿದಂತೆ ಅನೇಕರು ಇದ್ದರು.